ನಮ್ಮ ನೆರೆಯ ಪಾಕಿಸ್ತಾನದ(Pakistan) ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ. ಆದರೆ ಪಾಕಿಸ್ತಾನದ ಸೇನೆಯಿಂದ ಅಧಿಕಾರ ಪಡೆದವರು ಮತ್ತು ಅವರ ಪ್ರಭಾವಕ್ಕೆ ಒಳಗಾದವರು ಮಾತ್ರ ಎರಡು ದೇಶಗಳ(Country) ನಡುವೆ ಉದ್ವಿಗ್ನತೆ ಹೆಚ್ಚಿಸುತ್ತಾರೆ ಎಂದು ಎನ್ಸಿಪಿ ಅಧ್ಯಕ್ಷ(NCP President) ಶರದ್ ಪವಾರ್(Sharad Pawar) ಹೇಳಿದ್ದಾರೆ.

ಮಹಾರಾಷ್ಟ್ರದ(Maharashtra) ಕೊಂಡ್ವಾದಲ್ಲಿ ನಡೆದ ಈದ್-ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ. ಆದರೆ ಮೂಲಭೂತವಾದ ಮತ್ತು ಸೇನೆಯಿಂದ ಅಧಿಕಾರ ಪಡೆದವರು ದ್ವೇಷವನ್ನು ಹರಡುತ್ತಾರೆ. ಆದರೆ ನಮ್ಮ ನೆರೆಯ ದೇಶದಲ್ಲಿ ಯುವಕನೊಬ್ಬ ಪ್ರಧಾನಿಯಾಗಿ ಅಧಿಕಾರ ಹಿಡಿದು, ಇಡೀ ದೇಶಕ್ಕೆ ಹೊಸ ದಿಕ್ಕು ತೋರಿಸಲು ಪ್ರಯತ್ನಿಸಿದ. ಆದರೆ ಆತನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಪರೋಕ್ಷವಾಗಿ ಇಮ್ರಾನ್ ಖಾನ್ರನ್ನು ಹೊಗಳಿದರು.
ಇನ್ನು ನಾನು ಐಸಿಸಿ ಅಧ್ಯಕ್ಷನಾಗಿದ್ದಾಗ ಪಾಕಿಸ್ತಾನಕ್ಕೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಭಾರತ ತಂಡದೊಂದಿಗೆ ಕರಾಚಿ, ಲಾಹೋರ, ಇಸ್ಲಾಮಾಬಾದ್ ಎಲ್ಲೇ ಹೋದರು ನಮಗೆ ಅದ್ಭುತ ಸ್ವಾಗತ ದೊರೆಯುತ್ತಿತ್ತು. ಇನ್ನು ಕರಾಚಿಯಲ್ಲಿ ಒಮ್ಮೆ ಪಂದ್ಯದ ನಂತರ ಭಾರತ ತಂಡದ ಆಟಗಾರರು ಹೊರಗೆ ರೆಸ್ಟೋರೆಂಟ್ಗೆ ಊಟಕ್ಕೆ ಹೋಗಿದ್ದೇವು. ಆದರೆ ಆ ರೆಸ್ಟೋರೆಂಟ್ ಮಾಲಿಕ ನಮ್ಮಿಂದ ಹಣವನ್ನು ಪಡೆಯಲಿಲ್ಲ. ನೀವು ನಮ್ಮ ಅಥಿತಿಗಳು ಎಂದೇಳಿ ಅತ್ಯುತ್ತಮ ಆತಿಥ್ಯ ನೀಡಿದ ಎಂದು ಹೇಳಿದರು.

ಇನ್ನು ಇಂದು ಜಗತ್ತಿನಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ರಷ್ಯಾದಂತ ಶಕ್ತಿಶಾಲಿ ದೇಶ ಉಕ್ರೇನ್ನಂತ ಚಿಕ್ಕ ದೇಶದ ಮೇಲೆ ಯುದ್ದ ಮಾಡುತ್ತಿದೆ. ಇನ್ನೊಂದೆಡೆ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಯುವಕರು ದುರಾಡಳಿತದಿಂದ ಬೇಸತ್ತು ಬೀದಿಗಿಳಿದಿದ್ದಾರೆ. ರಾಜಕೀಯ ನಾಯಕರ ಮನೆಗಳನ್ನು ಸುಡುತ್ತಿದ್ದಾರೆ. ಹೀಗಾಗಿ ಶ್ರೀಲಂಕಾದಲ್ಲಿ ರಾಜಕೀಯ ನಾಯಕರು ತಲೆಮರೆಸಿಕೊಂಡಿದ್ದಾರೆ ಎಂದರು.