ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಹಿಂದಿನ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದು ಸಣ್ಣತನ ಮಾತ್ರವಲ್ಲ ನೀಚತನವೂ ಹೌದು. ನಮ್ಮ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದ್ದರೆ ಆಗ ತನಿಖೆಗೆ ಒತ್ತಾಯ ಮಾಡಬೇಕಿತ್ತು, ಆಗ ಸುಮ್ಮನಿದ್ದು ಈಗ ಎಲ್ಲಾ ಕಾಲದಲ್ಲೂ ಹಗರಣ ನಡೆದಿದೆ ಎಂದು ಹೇಳಿ ತಪ್ಪಿಸಿಕೊಳ್ಳೋಕೆ ಆಗಲ್ಲ. ಈ ಹಿಂದಿನ ಎಫ್ಡಿಎ, ತೋಟಗಾರಿಕೆ, ಪಶು ಸಂಗೋಪನೆ, ಲೋಕೋಪಯೋಗಿ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯೂ ನ್ಯಾಯಬದ್ಧವಾಗಿ, ಕ್ರಮಬದ್ಧವಾಗಿ ನಡೆದಿಲ್ಲ ಎಂಬ ಆರೋಪವಿದೆ.
ಇವುಗಳನ್ನು ಸೇರಿಸಿಕೊಂಡು ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಒತ್ತಾಯಿಸಿದ್ದಾರೆ. ಪಿಎಸ್ಐ ನೇಮಕಾತಿ(PSI Recruitment Scam) ಅಕ್ರಮದ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, ನೇಮಕಾತಿಯಲ್ಲಿ 300 ಜನರ ಓಎಮ್ಆರ್ ಶೀಟ್ ಗಳನ್ನು ತಿದ್ದಲಾಗಿದೆ, ಒಬ್ಬೊಬ್ಬ ಅಭ್ಯರ್ಥಿಯಿಂದ 30 ಲಕ್ಷದಿಂದ 1 ಕೋಟಿ ವರೆಗೂ ವಸೂಲಿ ಮಾಡಲಾಗಿದೆ. ಈ ಹಣ ಬಿಜೆಪಿ ಪಕ್ಷದ(BJP Party) ಯಾವ ಮಂತ್ರಿಗೆ ಹೋಗಿದೆ? ಮುಖ್ಯಮಂತ್ರಿಗಳಿಗೆ ಹೋಗಿದೆಯಾ ಇಲ್ಲವಾ? ಇವೆಲ್ಲ ಗೊತ್ತಾಗಬೇಕಾದರೆ ನ್ಯಾಯಾಂಗ ತನಿಖೆ ನಡೆಯಲೇಬೇಕು.
ಸಚಿವ ಅಶ್ವತ್ ನಾರಾಯಣ್(Ashwath Narayan) ಅವರ ಕಡೆಯ 5 ಜನ ಅಕ್ರಮವಾಗಿ ಆಯ್ಕೆಯಾಗಿದ್ದಾರೆ, ಅವರ ಸಂಬಂಧಿಕರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಸಿಐಡಿಯಿಂದ(CID) ಈ ಹಗರಣಗಳ ನಿಷ್ಪಕ್ಷಪಾತ ತನಿಖೆ ಸಾಧ್ಯವೇ? ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಗೆ ಬರಬಹುದು. ಇನ್ನು ಆರಗ ಜ್ಞಾನೇಂದ್ರ(Araga Jnanendra) ಅವರು ತಮ್ಮ ಮಾತು ಮತ್ತು ನಡವಳಿಕೆಗಳಿಂದ ತಾವೊಬ್ಬ ಬೇಜವಾಬ್ದಾರಿ ಸಚಿವ ಎಂದು ಸಾಬೀತು ಪಡಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದಿದ್ದ ಕೋಮು ಘರ್ಷಣೆ, ಮೈಸೂರಿನಲ್ಲಿ ನಡೆದ ಅತ್ಯಾಚಾರದ ಪ್ರಕರಣಗಳಲ್ಲಿ ಗೃಹಸಚಿವರ ಸುಳ್ಳು ಹೇಳಿಕೆಗಳೇ ಇದಕ್ಕೆ ಸಾಕ್ಷಿ.
ಇಂಥವರು ಗೃಹ ಸಚಿವರಾಗಲು ಲಾಯಕಿಲ್ಲ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ. ಎಸಿಬಿ ಕರ್ನಾಟಕದಲ್ಲಿ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಇದೆ, ರಾಜಸ್ಥಾನ, ಗುಜರಾತ್ ನಲ್ಲಿ ಇಲ್ಲವಾ? ಅದನ್ನು ದುರ್ಬಳಕೆ ಮಾಡಿಕೊಂಡರೆ ಸರ್ಕಾರದ ತಪ್ಪಾಗುತ್ತದೆ. ಅದಕ್ಕೆ ಹಿಂದಿನ ಸರ್ಕಾರಗಳು ಹೊಣೆಯಾಗುವುದಿಲ್ಲ. ರಾಜ್ಯದ ಎಸಿಬಿ (ಆ್ಯಂಟಿ ಕರಪ್ಷನ್ ಬ್ಯೂರೋ) ಅನ್ನು ಕಲೆಕ್ಷನ್ ಬ್ಯೂರೋ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಎಸಿಬಿ ಯನ್ನು ನಾವೇ ಹುಟ್ಟುಹಾಕಿದ್ದು ನಿಜ, ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ನಮ್ಮ ರಾಜಕೀಯ ವಿರೋಧಿಗಳನ್ನು ಮಣಿಸಲು ರಾಜಕೀಯ ಅಸ್ತ್ರವನ್ನಾಗಿ ಮಾಡಿರಲಿಲ್ಲ ಎಂದು ಹೇಳಿದ್ದಾರೆ.