ಬೆಂಗಳೂರು, ಜ. 28: ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಹೇಳಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಬಗ್ಗೆ ಟೀಕಿಸಿರುವ ಅವರು, ಒಂದಷ್ಟು ಸುಳ್ಳು, ಇನ್ನೊಂದಿಷ್ಟು ತಪ್ಪು ಮಾಹಿತಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹತಾಶ ಪ್ರಯತ್ನ ನಡೆಸಿದೆ.
ಕೊರೊನಾದಂತಹ ಮಾರಕ ರೋಗವನ್ನು ಬ್ರಹ್ಮಾಂಡ ಭ್ರಷ್ಟಚಾರವೆಸಗಲು ದುರುಪಯೋಗ ಪಡಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ, ರೋಗ ನಿಯಂತ್ರಣದಲ್ಲಿನ ವೈಫಲ್ಯಗಳನ್ನು ಸುಳ್ಳು ಅಂಕಿ ಅಂಶಗಳ ಮೂಲಕ ಮರೆಮಾಚಲು ಪ್ರಯತ್ನಿಸಿದೆ.
ತೆರಿಗೆಯಲ್ಲಿ ಪಾಲು, 15ನೇ ಹಣಕಾಸು ಆಯೋಗದ ಅನುದಾನ ಮತ್ತು ಜಿಎಸ್ ಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿವರವನ್ನು ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದರೆ ರಾಜ್ಯ ಸರ್ಕಾರದ ಬಣ್ಣ ಸಂಪೂರ್ಣ ಬಯಲಾಗುತ್ತಿತ್ತು.
ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶವೂ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ರಾಜ್ಯ ಬಿಜೆಪಿ ಸರ್ಕಾರ, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.24,941.73 ಕೋಟಿ ಪರಿಹಾರವನ್ನು ಕೇಳಿ ರಾಜ್ಯಕ್ಕೆ ದ್ರೋಹ ಬಗೆದಿದೆ.
ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರದಿಂದ ಕೇಳಿದರೂ ಸಿಕ್ಕಿರುವುದು ಮಾತ್ರ ರೂ.1,634 ಕೋಟಿ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ.