ಬೆಂಗಳೂರು, ಮೇ. 14: ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿ ಎಂಬ ಆಶಯದೊಂದಿಗೆ ಲಸಿಕೆ ಖರೀದಿಗೆ ಕಾಂಗ್ರೆಸ್ ಶಾಸಕರು ಸಂಸದರಿಂದ 100 ಕೋಟಿ ರೂ. ನೀಡಲು ನಿರ್ಧಾರಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಶುಕ್ರವಾರ ಮಾತನಾಡಿದ ಅವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಪ್ರತಿ ವರ್ಷ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದ್ದು, ಪ್ರದೇಶಾಭಿವೃದ್ಧಿ ನಿಧಿ ಎಂದು ನೀಡಲಾಗುತ್ತದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ಲಸಿಕೆ ಖರೀದಿಸಲು ರಾಜ್ಯ ಸರಕಾರಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಪ್ರತಿಯೊಬ್ಬರಿಗೆ ಕೊರೊನಾ ಲಸಿಕೆ ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ಕಾಂಗ್ರೆಸ್ ನಲ್ಲಿ 99 ಶಾಸಕರು ಇದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಮೊತ್ತವನ್ನೂ ಸೇರಿಸಿ 100 ಕೋಟಿ ರೂ. ನೀಡಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪ್ರಧಾನಿ ಮೋದಿ ನಿದ್ರಾವಸ್ತೆಯಲ್ಲಿದ್ದಾರೆ. ಕೇಂದ್ರ,ರಾಜ್ಯ ಸರ್ಕಾರಕ್ಕೆ ವ್ಯಾಕ್ಸಿನ್ ನೀಡುತ್ತಿಲ್ಲ. ಲಸಿಕೆ ಹಂಚಿಕೆಯಲ್ಲಿ ಸಂಪೂರ್ಣ ವಿಫಲವಾಗಿವೆ.
ಹೈಕೋರ್ಟ್,ಸುಪ್ರೀಂ ಕೂಡ ಛೀಮಾರಿಹಾಕಿದೆ. ನಿನ್ನೆಯೂ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ನನ್ನ ರಾಜಕೀಯದಲ್ಲಿ ಇಂತ ಬೇಜವಾಬ್ದಾರಿ ಸರ್ಕಾರ ನೋಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, 18 ರಿಂದ 45ರ ವಯೋಮಿತಿಯ ಜನರ ವ್ಯಾಕ್ಸಿನ್ ಗೆ ರಾಜ್ಯ ಸರ್ಕಾರಗಳೇ ಹಣ ಹಾಕಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ. ಹೀಗಾಗಿ ಕೇಂದ್ರ ಸರ್ಕಾರವೇ ಇಡೀ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸಿನ್ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.