ಬೆಂಗಳೂರು ಅ 18 : ಕಾಂಗ್ರೆಸ್ ಮಾಜಿ ಸಂಸದ ಉಗ್ರಪ್ಪ ಹಾಗೂ ಉಚ್ಛಾಟಿತ ಕಾಂಗ್ರೆಸ್ ನಾಯಕ ಸಲೀಂ ನಡುವೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತಾದ ಹಗರಣದ ಸಂಭಾಷಣೆಯೊಂದು ಸೋರಿಕೆಯಾದ ಬೆನ್ನಲ್ಲೇ ಡಿಕೆಶಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾಗಿದೆ.
ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ನೀಡಿರುವ ದೂರಿನಲ್ಲಿ ಅನ್ವಯವಾಗುವಂತೆ, ಕಾಂಗ್ರೆಸ್ ಪಕ್ಷದ ನಾಯಕರಿಗೆ ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಬಗ್ಗ ಸಂಪೂರ್ಣ ಮಾಹಿತಿ ತಿಳಿದಿದೆ. ಡಿ.ಕೆ.ಶಿವಕುಮಾರ್ ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವರಾಗಿದ್ದಾಗ 8 ರಿಂದ 12 ಪರ್ಸಂಟೇಜ್ ಕಮೀಷನ್ ಪಡೆದಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರೇ ಮಾಡಿದ್ದಾರೆ. 2013 ರ ಚುನಾವಣೆಗಾಗಿ ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರದ ಹಣ ಸಂಪಾದನೆಯ ಆರೋಪ ಕೂಡ ಇದೆ. ಅಕ್ರಮ ಹಣ ಸಂಪಾದನೆಯ ಬಗ್ಗೆ ಗೊತ್ತಿದ್ದರೂ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ, ಕಾಂಗ್ರೆಸ್ನ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ಗುಟ್ಟಾಗಿ ಮಾತನಾಡಿಕೊಂಡಿದ್ದು, ನಂತರ ಮಾಧ್ಯಮಗಳಲ್ಲಿ ಈ ಸಂಭಾಷಣೆ ಸಾಕಷ್ಟು ಚರ್ಚೆಯನ್ನುಂಟು ಮಾಡಿತ್ತು. ಇದಾದ ಬಳಿಕ, ಕಾಂಗ್ರೆಸ್ ಶಿಸ್ತು ಪರಿಪಾಲನಾ ಸಮಿತಿ ಮುಖ್ಯಸ್ಥರಾದ ರೆಹಮಾನ್ ಖಾನ್ ಅವರು, ಸಲೀಂ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು, ಅಲ್ಲದೇ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಮಾಜಿ ಸಂಸದ ಉಗ್ರಪ್ಪನವರು ಕಾಂಗ್ರೆಸ್ ಸೇರಿದಾಗಿನಿಂದ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಜೀವನದುದ್ದಕ್ಕೂ ಸಂಸ್ಕಾರಯುತ ಮೌಲ್ಯಗಳ ಜೊತೆ ಶಿಸ್ತನ್ನು ಅಳವಡಿಸಿಕೊಂಡು ಬದುಕುತ್ತಿದ್ದು ಅವರನ್ನು ಅಮಾನತು ಮಾಡಿರುವುದು ಅವಸರದ ನಿರ್ಧಾರವಾಗಿದೆ ಎಂದು ಕಾಂಗ್ರೆಸ್ ಶಿಸ್ತು ಪರಿಪಾಲನಾ ಸಮಿತಿ ಮುಖ್ಯಸ್ಥ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದರು.