- ತಿರುಪತಿಯಲ್ಲಿ ಮತ್ತೊಂದು (Silk shawl scam in Tirumala) ಅಕ್ರಮ ಬಯಲು
- 2015 ರಿಂದ 2025 ರವರೆಗೆ ನಕಲಿ ರೇಷ್ಮೆ ಶಾಲು ಖರೀದಿ
- ರೇಷ್ಮೆ ಶಾಲಿನ ಮೇಲೆ ಇರಬೇಕಾದ ‘ಸಿಲ್ಕ್ ಹೊಲೊಗ್ರಾಮ್ ಟ್ಯಾಗ್’ ನಾಪತ್ತೆ
- ಎಸಿಬಿ ತನಿಖೆ ನಡೆಸುವಂತೆ ಸರ್ಕಾರಕ್ಕೆ TTD ಮನವಿ
Tirupati: ಹಿಂದೂಗಳ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾಗಿರುವ (Silk shawl scam in Tirumala)
ತಿರುಮಲ ತಿರುಪತಿ ದೇವಸ್ಥಾನ (TTD) ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೆ ಗಮನ ಸೆಳೆಯುತ್ತಿದೆ.
ಈ ಹಿಂದೆ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆಯ ಆರೋಪ, ಕಾಣಿಕೆ ಹುಂಡಿಯಲ್ಲಿ ಹಣ ಕಳ್ಳತನ,
ಭಕ್ತರ ನಂಬಿಕೆಗೆ ದ್ರೋಹ ಮಾಡುವ ವಿವಿಧ ಅಕ್ರಮಗಳು ಒಂದರ ಹಿಂದೆ ಒಂದು ಬೆಳಕಿಗೆ ಬಂದಿತ್ತು.
ಈ ವಿವಾದಗಳು ತಣ್ಣಗಾಗುವ ಮುನ್ನವೇ ಈಗ ಮತ್ತೊಂದು ದೊಡ್ಡ ಮಟ್ಟದ ಹಗರಣ ಬಹಿರಂಗವಾಗಿದೆ.

ದೇವಸ್ಥಾನಕ್ಕೆ ರೇಷ್ಮೆ ಶಾಲು ಪೂರೈಕೆಯ ಹೆಸರಲ್ಲಿ, ಪೂರೈಕೆದಾರರು 10 ವರ್ಷಗಳ ಕಾಲ ಕಳಪೆ, (Silk shawl scam in Tirumala)
ಪಾಲಿಸ್ಟರ್ನಿಂದ ತಯಾರಿಸಿದ ಶಾಲುಗಳನ್ನು ರೇಷ್ಮೆ ಎಂದು ಮಾರಾಟ ಮಾಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಟಿಟಿಡಿ ನಡೆಸಿದ ಆಂತರಿಕ ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಈ ವಂಚನೆಯಿಂದ ದೇವಾಲಯಕ್ಕೆ ಕನಿಷ್ಠ ₹54–55 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಭಕ್ತರ ನಂಬಿಕೆ, ದೇಗುಲದ ಗೌರವ ಮತ್ತು ಧಾರ್ಮಿಕ ಸಂಪ್ರದಾಯಗಳ ಮೇಲೆ ನೇರ ದಾಳಿ ಮಾಡಿದಂತಿರುವ ಈ ಅಕ್ರಮ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.
ತಿರುಪತಿಯಲ್ಲಿ ಗಣ್ಯ ಅತಿಥಿಗಳು, ದಾನಿಗಳು, ವಿದ್ವಾಂಸರು ಮತ್ತು ಪ್ರಮುಖ ವ್ಯಕ್ತಿಗಳಿಗೆ ಸನ್ಮಾನವಾಗಿ ನೀಡುವ ರೇಷ್ಮೆ ಶಾಲುಗಳು ದೇಗುಲದ ಗೌರವದ ಸಂಕೇತ.
ಪ್ರತಿಯೊಂದು ಶಾಲು ಶುದ್ಧ ರೇಷ್ಮೆಯಿಂದ ನೇಯ್ದಿರಬೇಕು ಹಾಗೂ ಸಿಲ್ಕ್ ಮಾರ್ಕ್ ಹೋಲೊಗ್ರಾಂ (Silk Mark Hologram) ಕಡ್ಡಾಯವಾಗಿರಬೇಕು ಎಂಬುದು ಟಿಟಿಡಿಯ ನಿಯಮ.
ಆದರೆ 2015ರಿಂದ 2025ರವರೆಗೆ ಒಂದೇ ಸಂಸ್ಥೆ ಟೆಂಡರ್ ಪಡೆದು ಪೂರೈಸಿದ್ದ ಶಾಲುಗಳ ಬಗ್ಗೆ ಸಂಶಯ ಹುಟ್ಟಿದ ಹಿನ್ನೆಲೆಯಲ್ಲಿ, ಆಂತರಿಕ ಜಾಗೃತ ದಳ ಶಾಲುಗಳ ಗುಣಮಟ್ಟ ಪರಿಶೀಲಿಸಲು ತೀರ್ಮಾನಿಸಿತು.
ಧರ್ಮಾವರಂ ಮತ್ತು ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಲ್ಯಾಬೋರೇಟರಿಗಳಿಗೆ ಕಳುಹಿಸಿದ ಮಾದರಿಗಳ ವರದಿ ಅಘಾತಕಾರಿ.
“ರೇಷ್ಮೆ” ಎಂದು ದೇಗುಲಕ್ಕೆ ಪೂರೈಸಿದ ದುಪಟ್ಟಾಗಳು ನೈಜ ರೇಷ್ಮೆಯಲ್ಲ, ಬದಲಿಗೆ ಚೆನ್ನಾಗಿ ಹೊದಿಸಿದ, ಕಡಿಮೆ ದರದ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಲ್ಪಟ್ಟ ಸಾಮಾನ್ಯ ಶಾಲುಗಳು ಎಂದು ಎರಡೂ ಲ್ಯಾಬ್ಗಳು ದೃಢಪಡಿಸಿವೆ.
ಮಾತ್ರವಲ್ಲದೆ, ಶಾಲುಗಳಲ್ಲಿ ಕಡ್ಡಾಯವಾಗಿರುವ “ಸಿಲ್ಕ್ ಹೊಲೊಗ್ರಾಂ” ಕೂಡ ಇರಲಿಲ್ಲ.
ಶುದ್ಧ ರೇಷ್ಮೆಗೆ ಬಳಸಬೇಕಾದ ಮೌಲ್ಯದ ಬದಲು ಕಳಪೆ ಪದಾರ್ಥಗಳನ್ನು ಬಳಸಿ, ದೇವಸ್ಥಾನಕ್ಕೇ ಮೋಸ ಮಾಡಿದ ಈ ವರದಿ ಟಿಟಿಡಿ ಆಡಳಿತಕ್ಕೆ ದೊಡ್ಡ ಆಘಾತ ತಂದಿದೆ.
ಇನ್ನು ತನಿಖೆಯಲ್ಲಿ ಮತ್ತೊಂದು ಗಂಭೀರ ಸಂಗತಿ ಬಹಿರಂಗವಾಗಿದೆ ಅದೇನೆಂದರೆ ಪ್ರತಿ ಶಾಲಿನ ನಿಜವಾದ ಮಾರುಕಟ್ಟೆ ಬೆಲೆ ಸುಮಾರು ₹300–₹350 ಇದ್ದರೂ, ಟಿಟಿಡಿಗೆ ಪೂರೈಸಿದಾಗ ಅದನ್ನು ಪ್ರತಿ ತುಣುಕಿಗೆ ₹1,389 ಎಂದು ಬಿಲ್ ಮಾಡಲಾಗಿದೆ.
ಈ ಅಂತರವೇ ಸುಮಾರು ₹55 ಕೋಟಿ ರೂ. ಮೋಸ ಮಾಡಲಾಗಿದೆ ಅಧಿಕಾರಿಗಳು ಸೂಚಿಸಿದ್ದಾರೆ.
ಇಂಥ ದೊಡ್ಡ ಮೊತ್ತದ ಟೆಂಡರ್ಗಳನ್ನು ನಿರಂತರವಾಗಿ ಒಂದೇ ಸಂಸ್ಥೆಗೆ ನೀಡಿರುವುದು, ಖರೀದಿ ವಿಭಾಗದ ಮೇಲ್ವಿಚಾರಣೆಯ ಕೊರತೆ ಮತ್ತು ನಿರ್ಲಕ್ಷ್ಯಕ್ಕೆ ಉದಾಹರಣೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.
ಅವರು, ಇದು ನಂಬಿಕೆ ದ್ರೋಹ. ಭಕ್ತರ ದೇಣಿಗೆಯಿಂದ ನಡೆಯುವ ದೇವಾಲಯದ ಕಾರ್ಯಗಳಲ್ಲಿ ಇಂತಹ ಮೋಸ ನಡೆಯಬಾರದು.
350 ರೂ. ಬೆಲೆಯ ಶಾಲನ್ನು 1,300 ರೂ.ಗೆ ಬಿಲ್ ಮಾಡುವುದು ಅತ್ಯಂತ ಗಂಭೀರವಾದ ಕರ್ತವ್ಯಲೋಪ, ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ACB (Anti-Corruption Bureau) ತನಿಖೆ ನಡೆಸುವಂತೆ ಟಿಟಿಡಿ ಆಂಧ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದೆ.
ಈ ಹಗರಣವು ಒಂದೇ ಘಟನೆಯಲ್ಲ; ಕಳೆದ ಕೆಲ ವರ್ಷಗಳಲ್ಲಿ ತಿರುಪತಿ ದೇಗುಲದ ಆಡಳಿತದಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಹಲವು ಘಟನೆಗಳು ನಡೆದಿದೆ.
2023ರಲ್ಲಿ ಕಾಣಿಕೆ ಹುಂಡಿಯಲ್ಲಿ ಹಾಕಿದ ಹಣ ಕದ್ದುಕೊಂಡ ಗುಮಾಸ್ತನೊಬ್ಬ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಘಟನೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿ ಆಗಿತ್ತು.
2024ರಲ್ಲಿ ಲಡ್ಡುವಿನಲ್ಲಿ ಶುದ್ಧ ಹಸುವಿನ ತುಪ್ಪ ಬದಲಿಗೆ ಪ್ರಾಣಿ ಕೊಬ್ಬಿನ ಮಿಶ್ರಿತ ತುಪ್ಪ ಬಳಸಲಾಗಿದೆ ಎಂಬ ಆರೋಪ ಕೂಡ ಭಕ್ತರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿತ್ತು.
ಆ ಪ್ರಕರಣವನ್ನು ಸಿಬಿಐ ಮೇಲ್ವಿಚಾರಣೆ ಮಾಡುತ್ತಿರುವ ವಿಶೇಷ ತನಿಖಾ ತಂಡ ಪರಿಶೀಲಿಸುತ್ತಿದೆ.
ಈಗ ರೇಷ್ಮೆ ಶಾಲು ಹಗರಣವೂ ಸೇರಿ, ಟಿಟಿಡಿ ಆಡಳಿತದ ಮೇಲೆ ಗಂಭೀರವಾದ ಪ್ರಶ್ನೆಗಳು ಮೂಡಿವೆ.
ವಿಶ್ವ ವಿಖ್ಯಾತಿ ಪಡೆದಿರುವ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಈ ಮಟ್ಟದ ಅವ್ಯವಹಾರಗಳು ಹೇಗೆ ನಡೆಯುತ್ತಿವೆ? ಆಡಳಿತ ಮಂಡಳಿ ಇದನ್ನು ಗಮನಿಸಿಯೇ ಇಲ್ಲವೇ?ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ನೋಡಿದರೆ, ತಿರುಪತಿ ದೇವಾಲಯದಲ್ಲಿ ನಡೆದಿರುವ ಈ ಹಗರಣವು ಕೇವಲ ಹಣಕಾಸಿನ ನಷ್ಟವಷ್ಟೇ ಅಲ್ಲ, ಭಕ್ತರ ಭಾವನೆ, ನಂಬಿಕೆ ಮತ್ತು ದೇವಾಲಯದ ಗೌರವಕ್ಕೆ ದೊಡ್ಡ ಹೊಡೆತವಾಗಿದೆ.
ರೇಷ್ಮೆ ಶಾಲುಗಳಂತಹ ಧಾರ್ಮಿಕ ಸಂಪ್ರದಾಯದ ಭಾಗವನ್ನೇ ಲಾಭಕ್ಕಾಗಿ ದುರುಪಯೋಗ ಮಾಡಿದ ಈ ಘಟನೆ ಟಿಟಿಡಿ ಆಡಳಿತಕ್ಕೆ ಮಾತ್ರವಲ್ಲ, ರಾಜ್ಯ ಸರ್ಕಾರಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.
ಇದನ್ನು ಓದಿ : ಭಾರತಕ್ಕೆ ಸುಂಕದ ಶಾಕ್ ನೀಡಲಿರುವ ಮೆಕ್ಸಿಕೋ : 2026 ರಿಂದ ಭಾರತದ ವಸ್ತುಗಳಿಗೆ ಆಮದು ಸುಂಕ ಶೇ. 50ರಷ್ಟು ಹೆಚ್ಚಳ