ವಿಜಯಪುರ, ಮಾ.31: ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಮುಖ್ಯಮಂತ್ರಿ ಮಗ ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಂಶ ಹೊರ ಬರಬೇಕಾದರೆ ಸಿಬಿಐ ತನಿಖೆ ನಡೆಯಬೇಕಿದೆ. ಏಕೆಂದರೆ ಎಸ್ಐಟಿ ತಂಡದಲ್ಲಿರುವ ಅಧಿಕಾರಿಗಳು ಮುಖ್ಯಮಂತ್ರಿ ಪುತ್ರ ವಿಜಯೇಂದ್ರನ ಮಾತು ಕೇಳುತ್ತಾರೆ. ಎಸ್ಐಟಿ ಅಧಿಕಾರಿಗಳು ಯಾರ ಮಾತು ಕೇಳದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಆದರೆ, ಅದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಲ್ಲರೂ ಒಂದೇ. ಎಲ್ಲರೂ ವ್ಯವಹಾರ ಹೊಂದಿದ್ದಾರೆ. ಇವರ ಸಿಡಿ ಅವರ ಬಳಿಯಲ್ಲಿದೆ, ಅವರ ಸಿಡಿ ಇವರ ಬಳಿಯಲ್ಲಿದೆ. ಹೀಗಾಗಿ ಎಲ್ಲರು ಸೇರಿ ರಮೇಶ್ ಜಾರಕಿಹೊಳಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮತ್ತೆ ಮಾತನಾಡಿದ ಅವರು, ರಾಜ್ಯದಲ್ಲಿ ಮೇ 2ರ ನಂತರ ಮುಖ್ಯಮಂತ್ರಿ ಬದಲಾಗುವುದು ನಿಶ್ಚಿತ. ಜಗತ್ತಿನ ಯಾವ ಶಕ್ತಿ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ 65 ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದಲ್ಲಿ ಉಳಿದ 60 ಶಾಸಕರು ನನ್ನ ಬಳಿ ಇದ್ದಾರೆ ಅಂಥಲ್ಲವೇ? ನಾನು ಸಿಎಂ ಅಲ್ಲ, ಸಚಿವನೂ ಅಲ್ಲ. ಹೀಗಿದ್ದರೂ ನನ್ನ ಬೆಂಬಲಕ್ಕೆ 60 ಸದಸ್ಯರು ಇದ್ದಾರೆ. ಹಾಗಿದ್ದಲ್ಲಿ ನಾನು ಅವರಿಗಿಂತ ಸ್ಟ್ರಾಂಗ್ ಅಲ್ಲವೇ ಎಂದು ಪ್ರಶ್ನಿಸಿದರು.