New Delhi: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ (Congress) ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಜೀವನದಲ್ಲಿ ಬದಲಾವಣೆ ತಂದು ಉತ್ತಮ ಜೀವನ ನಡೆಸಿಕೊಡಲು ಅನುವು ಮಾಡಿಕೊಡುತ್ತದೆ ಎಂದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.ಲೋಕಸಭೆಗೆ ಸೋಮವಾರ ದೇಶದ ವಿವಿಧೆಡೆ 4ನೇ ಚರಣದ ಮತದಾನ ನಡೆಯುತ್ತಿದ್ದಾಗಲೇ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಅವರು ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ ಹಾಗೂ ತೆಲಂಗಾಣದಲ್ಲೂ (Karnataka And Telangana) ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಜನರ ಜೀವನದಲ್ಲಿ ಸುಧಾರಣೆ ತಂದಿವೆ ಅದರಲ್ಲೂ ಮಹಿಳೆಯರ ಬದುಕಿನಲ್ಲಿ ಬಹಳಷ್ಟು ಬದಲಾಗಿದೆ. ಮಹಿಳೆಯರು ಆತ್ಮವಿಶ್ವಾಸದಿಂದ ಸ್ವಾವಲಂಬಿಗಳಾಗಿ ಬದುಕುವಂತಾಗಿದ್ದಾರೆ. ಅದೆಷ್ಟೋ ಮಹಿಳೆಯರು ಪ್ರತಿ ತಿಂಗಳ ಸಿಗುವ ಹಣದಿಂದ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡಿದ್ದಾರೆ.ಇನ್ನು ಕೆಲವರು ಮಕ್ಕಳ ಓದಿಗೆ ಹಣವನ್ನು ಬಳಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಮಯದಿಂದ ಆಧುನಿಕ ಭಾರತ ನಿರ್ಮಾಣದವರೆಗೆ ಮಹಿಳೆಯರು ಬೃಹತ್ ಕೊಡುಗೆ ನೀಡಿದ್ದಾರೆ. ಆದರೆ ಹಣದುಬ್ಬರ ಹೆಚ್ಚಳದಿಂದಾಗಿ ಇಂದು ಮಹಿಳೆಯರು ಅರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ನ್ಯಾಯ ಒದಗಿಸಲು ಗ್ಯಾರಂಟಿ ಎಂಬ ಕ್ರಾಂತಿಕಾರಕ ಯೋಜನೆಯನ್ನು ಕಾಂಗ್ರೆಸ್ ತಂದಿದೆ. ಮುಂದಿನ ದಿನಗಳಲ್ಲಿ ಮಹಾಲಕ್ಷ್ಮಿ ಎಂಬ ಯೋಜನೆಯಡಿ ವಾರ್ಷಿಕ 1 ಲಕ್ಷ ರು.ಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಸೋನಿಯಾ ಗಾಂಧಿ (Sonia Gandhi) ಘೋಷಿಸಿದ್ದಾರೆ.