ನವದೆಹಲಿ, ಜ. 06: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಇಬ್ಬರೂ ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಇವರಿಗೆ ಈ ಗೌರವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಸೋನಿಯಾ ಗಾಂಧಿ ಮತ್ತು ಮಾಯಾವತಿ ಅವರು ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಭಾರತ ರತ್ನಕ್ಕೆ ಅರ್ಹರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾವತ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ತಮ್ಮ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿರುವ ರಾವತ್, ‘ನೀವು ಅವರ ರಾಜಕೀಯವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು ಆದರೆ ಸೋನಿಯಾಜಿಯವರ ಘನತೆ, ಸಾಮಾಜಿಕ ಕಳಕಳಿ ಬಹುಮುಖ್ಯವಾದದ್ದು. ಭಾರತೀಯ ಮಹಿಳೆಯರ ಸ್ಥಾನವನ್ನು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಈ ಇಬ್ಬರು. ಅದನ್ನು ನೀವು ತಳ್ಳಿಹಾಕುವಂತಿಲ್ಲ’ ಎಂದಿದ್ದಾರೆ. ಮಾಯಾವತಿಯವರು ಹಲವಾರು ವರ್ಷಗಳಿಂದ ಶೋಷಿತವರ್ಗದ ಮತ್ತು ಕೆಳವರ್ಗದ ಜನರ ಪರವಾಗಿದ್ದು ಅವರಲ್ಲಿ ವಿಶ್ವಾಸ ಮೂಡಿಸಿದ ದಿಟ್ಟ ಮಹಿಳೆಯಾಗಿದ್ದಾರೆ. ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವು ಮೂಲಕ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಮಾಯಾವತಿಯವರದ್ದು ಅಭಿಮಾನಿ ಬಳಗದಲ್ಲಿ ಮಾಯಾವತಿಯವರು ಅಕ್ಕರೆಯ ಬೆಹನ್ಜಿ ಎಂದು ಗುರುತಿಸಿಕೊಂಡಿದ್ದಾರೆ.