ಬೆಂಗಳೂರು, ಫೆ. 11: ಕುರುಬ ಸಮುದಾಯದ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್ ಅವರು ಈಶ್ವರಪ್ಪನನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಆದರೆ ಆರ್ ಎಸ್ ಎಸ್ ನವರು ಕೆ.ಎಸ್ ಈಶ್ವರಪ್ಪ ಅವರನ್ನ ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ. ಎಸ್.ಟಿ ಮೀಸಲಾತಿ ಹೋರಾಟ ಆರ್.ಎಸ್ ಎಸ್ ಪ್ರೇರಿತ ಎಂದು ಆರೋಪಿಸಿದ್ದಾರೆ.
ಕುಲಶಾಸ್ತ್ರ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಎಂದಿದ್ದೆ. ಆದರೆ ಈಗ ಹೋರಾಟ ಮಾಡುತ್ತಿರುವುದು ಆರ್. ಎಸ್ ಎಸ್ ಪ್ರೇರಿತ. ಈಶ್ವರಪ್ಪರನ್ನ ಆರ್.ಎಸ್ ಎಸ್ ಎತ್ತಿಕಟ್ಟುತ್ತಿದ್ದಾರೆ. ಕುರುಬರ ಮೀಸಲಾತಿ ಹೋರಾಟದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಒಡೆಯುವುದೇ ಅವರ ಮುಖ್ಯ ಉದ್ದೇಶ. ಈಶ್ವರಪ್ಪನವರು ಹೋರಾಟ ಮಾಡುತ್ತಿರೋದು ಯಾರ ವಿರುದ್ಧ? ತಮ್ಮದೇ ಸರ್ಕಾರದ ವಿರುದ್ಧವಲ್ಲವೇ? ಅರ್ಥವಾಗೋಕೆ ಇದಕ್ಕಿಂತ ಹೆಚ್ಚು ಬೇಕಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆದೇಶಿಸಿದ್ದೆ, ಈಗಲೂ ಅಧ್ಯಯನ ನಡೆಯುತ್ತಿದೆ, ಅದು ಮುಗಿದು ವರದಿ ಬಂದ ನಂತರ ಸರ್ಕಾರದ ಮೇಲೆ ಒತ್ತಾಡ ಹೇರಬೇಕು. ಈಗಲೇ ಸಮಾವೇಶ, ರ್ಯಾಲಿಗಳು ಅನಗತ್ಯ ಅನ್ನೋದು ನನ್ನ ಅನಿಸಿಕೆ ಎಂದಿದ್ದಾರೆ.
ಇದೇ ವೇಳೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಕೆಲಸ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್ ಈಶ್ವರಪ್ಪಗೆ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನಾನು ಏನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಸಚಿವ ಈಶ್ವರಪ್ಪ ಅವರ ಸರ್ಟಿಫಿಕೆಟ್ ಬೇಕಿಲ್ಲ. ಈಶ್ವರಪ್ಪ ಯಾರ್ರಿ?, ಈಶ್ವರಪ್ಪಗೆ ಲೆಕ್ಕ ಒಪ್ಪಿಸಬೇಕಾ? ಈ ಡೋಂಟ್ ಕೇರ್ ಈಶ್ವರಪ್ಪ ಎಂದು ಉತ್ತರಿಸಿದರು.
5 ವರ್ಷ ಮುಖ್ಯಮಂತ್ರಿಯಾಗಿ ನಾಡಿನ ಶೋಷಿತ ಸಮುದಾಯಗಳಿಗಾಗಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎಂದು ಜನರಿಗೆ ಗೊತ್ತು. ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಡೋಕೆ ಈಶ್ವರಪ್ಪ ಯಾರು? ಅವರು ಕೊಡೋ ಸರ್ಟಿಫಿಕೇಟ್ ಅಗತ್ಯ ನನಗಿಲ್ಲ. ತಮ್ಮ ಸರ್ಕಾರ ಏನು ಮಾಡಿದೆ ಎಂದು ಅವರು ಹೇಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೆಡಿ(ಎಸ್) ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ತಮಗಿರುವ ಅಲ್ಪಸ್ವಲ್ಪ ಬಲವನ್ನು ಬಿಜೆಪಿಗೆ ಧಾರೆಯೆರೆದು ಆ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿ(ಎಸ್) ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ ಎಂದು ಟೀಕಿಸಿದರು.