ಲಾಕಪ್ ಡೆತ್ ಮತ್ತು ಪೊಲೀಸ್ (Standing Order 1060 new order) ದೌರ್ಜನ್ಯ ತಡೆಯಲು ಖಡಕ್ ಆದೇಶ ಜಾರಿ
ಮಾನಸಿಕ ಕಿರುಕುಳ, ವಿನಾಕಾರಣ ಅಮಾನತು ವಿರುದ್ಧ ಡಿಜಿಪಿ ಕ್ರಮ
ಸಿಬ್ಬಂದಿ ಹಕ್ಕು ರಕ್ಷಣೆ ಮತ್ತು ಶಿಸ್ತು ಕಾಪಾಡಲು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಲಾಕಪ್ ಡೆತ್ ಹಾಗೂ ಪೊಲೀಸ್ ದೌರ್ಜನ್ಯ (Standing Order 1060 new order) ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಮತ್ತು ಕಠಿಣ ಕ್ರಮ ಕೈಗೊಂಡಿದೆ.
ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಾಯ್ದೆಯ ಅಡಿಯಲ್ಲಿ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ (Dr. M.A. Salim) ಅವರು ‘ಸ್ಟ್ಯಾಂಡಿಂಗ್ ಆರ್ಡರ್-1060’ ಎಂಬ ಹೊಸ ಆದೇಶವನ್ನು ಜಾರಿಗೆ ತಂದಿದ್ದು, ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳ ವಿರುದ್ಧ ತಕ್ಷಣ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ಆದೇಶವು ರಾಜ್ಯದಾದ್ಯಂತ ಎಲ್ಲಾ ಪೊಲೀಸ್ ಘಟಕಗಳಿಗೆ ಅನ್ವಯವಾಗಲಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ಪ್ರಮುಖ ಹೆಜ್ಜೆಯಾಗಿದೆ.
ಹೊಸ ಆದೇಶದ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ, ಹಲ್ಲೆ ಅಥವಾ ಸಾವು ಸಂಭವಿಸಿದ ತಕ್ಷಣ (Standing Order 1060 new order) ಸ್ಥಳೀಯ ಪೊಲೀಸರು
ಬಿಎನ್ಎಸ್ಎಸ್ ಸೆಕ್ಷನ್ (Session) 103 ಮತ್ತು 185ರ ಅಡಿಯಲ್ಲಿ ಕಡ್ಡಾಯವಾಗಿ ಸ್ಥಳ ಪರಿಶೀಲನೆ ಮತ್ತು ಸ್ಪಾಟ್ ಮಹಜರ್ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.
ತನಿಖೆಯಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಹಾಗೂ ಸಾಕ್ಷ್ಯಾಧಾರಗಳನ್ನು ಮರೆಮಾಚದಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದರಿಂದ ಪೊಲೀಸ್ ತನಿಖೆ ಹೆಚ್ಚು ಪಾರದರ್ಶಕ ಮತ್ತು ಕಾನೂನುಬದ್ಧವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
‘ಸ್ಟ್ಯಾಂಡಿಂಗ್ ಆರ್ಡರ್-1060’ ಕೇವಲ ಕಸ್ಟಡಿ ದೌರ್ಜನ್ಯ ತಡೆಯುವ ನಿಯಮ ಮಾತ್ರವಲ್ಲ, ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುವ ಮಹತ್ವದ ಆದೇಶವಾಗಿಯೂ ಪರಿಗಣಿಸಲಾಗಿದೆ.
ಹಲವಾರು ಸಂದರ್ಭಗಳಲ್ಲಿ ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್ (Head Constable) ಹಾಗೂ ಎಎಸ್ಐಗಳ ಮೇಲೆ ಮೇಲಧಿಕಾರಿಗಳಿಂದ ಮಾನಸಿಕ ಒತ್ತಡ, ಅನ್ಯಾಯ ಮತ್ತು ಕಿರುಕುಳ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಸಣ್ಣಪುಟ್ಟ ತಪ್ಪುಗಳಿಗೆ ಅಮಾನತು ಮಾಡುವುದು, ರಜೆ ನಿರಾಕರಿಸುವುದು ಹಾಗೂ ಅನಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತಹ ಘಟನೆಗಳಿಂದ ಸಿಬ್ಬಂದಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದರು. ಈ ಹಿನ್ನೆಲೆ, ಸಿಬ್ಬಂದಿಗೆ ನ್ಯಾಯ ಮತ್ತು ಭದ್ರತೆ ಒದಗಿಸಲು ಈ ಆದೇಶ ಜಾರಿಗೊಳಿಸಲಾಗಿದೆ.
ಆದೇಶದಲ್ಲಿರುವ ನಿಯಮಗಳ ಪ್ರಕಾರ, ಯಾವುದೇ ಸಿಬ್ಬಂದಿಯ ವಿರುದ್ಧ ವೈಯಕ್ತಿಕ ದ್ವೇಷದಿಂದ ಅಥವಾ ಸೂಕ್ತ ಕಾರಣವಿಲ್ಲದೆ ಶಿಸ್ತು ಕ್ರಮ ಜರುಗಿಸಲು ಅವಕಾಶ
ಇರುವುದಿಲ್ಲ. ವಾರದ ರಜೆ ನೀಡುವುದು ಕಡ್ಡಾಯವಾಗಿದ್ದು, ಆರೋಗ್ಯ ಸಮಸ್ಯೆಗಳ ಸಂದರ್ಭಗಳಲ್ಲಿ ರಜೆ ನಿರಾಕರಿಸಬಾರದು ಎಂದು ಸೂಚಿಸಲಾಗಿದೆ.
ಗಂಭೀರ ಆರೋಪಗಳಿಲ್ಲದೆ ಏಕಾಏಕಿ ಅಮಾನತು ಮಾಡುವಂತಿಲ್ಲ ಎಂಬ ನಿಯಮವೂ ಸೇರಿಸಲಾಗಿದೆ. ಒಂದು ವೇಳೆ ಕೆಳಹಂತದ ಸಿಬ್ಬಂದಿಗೆ ಅನ್ಯಾಯವಾಗುತ್ತಿದೆ ಎಂದು ಭಾಸವಾದರೆ, ಅವರು ನೇರವಾಗಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಇಲಾಖೆಯೊಳಗಿನ ಒತ್ತಡ ಕಡಿಮೆಯಾಗುವ ಜೊತೆಗೆ ಸಿಬ್ಬಂದಿಯ ಆತ್ಮವಿಶ್ವಾಸ ಹೆಚ್ಚುವ ನಿರೀಕ್ಷೆಯಿದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳು ಈ ಆದೇಶವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಗಂಭೀರ ಎಚ್ಚರಿಕೆ ನೀಡಿದೆ.
ನಿಯಮಗಳನ್ನು ಉಲ್ಲಂಘಿಸಿ ಸಿಬ್ಬಂದಿಯನ್ನು ವಿನಾಕಾರಣ ವರ್ಗಾವಣೆ ಮಾಡುವುದು, ಅನಗತ್ಯ ಶಿಕ್ಷೆ ನೀಡುವುದು ಹಾಗೂ ಅಧಿಕಾರ ದುರುಪಯೋಗ ಮಾಡುತ್ತಿರುವ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
‘ಸ್ಟ್ಯಾಂಡಿಂಗ್ ಆರ್ಡರ್-1060’ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಸಿಬ್ಬಂದಿ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಕಾನೂನು ತಜ್ಞರು ಹಾಗೂ ಪೊಲೀಸ್ ಸಂಘಟನೆಗಳ ಅಭಿಪ್ರಾಯದಂತೆ, ಈ ಆದೇಶವು ಇಲಾಖೆಯಲ್ಲಿ ಉತ್ತಮ ಆಡಳಿತ ವ್ಯವಸ್ಥೆ ನಿರ್ಮಿಸಲು ಹಾಗೂ ಪೊಲೀಸ್ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಮಹತ್ವದ ಹೆಜ್ಜೆಯಾಗಲಿದೆ.
ಇದನ್ನು ಓದಿ : https://vijayatimes.com/hantavirus-infection-in-canada/