ಕೋಲಾರ ನ 15 : ನಗರದಿಂದ ಚಿಕ್ಕಮಗಳೂರಿನ ಬಾಬಾಬುಡನ್ಗಿರಿ ದತ್ತಪೀಠಕ್ಕೆ ಹೊರಟಿದ್ದ ಮಾಲಾಧಾರಿಗಳ ಬಸ್ ಮೇಲೆ ಕಿಡಿಗೇಡಿಗಳು ಶನಿವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದು, 10 ಜನರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 19 ದತ್ತಮಾಲಾಧಾರಿಗಳು ಹಾಗೂ ಇತರ ಮೂವರು ಮಿನಿ ಬಸ್ನಲ್ಲಿ ದತ್ತಪೀಠಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಕೋಲಾರ-ಬೆಂಗಳೂರು ರಸ್ತೆಯಲ್ಲಿ ಮಾರ್ಗಮಧ್ಯೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹೋಗುತ್ತಿದ್ದಾಗ ಸುಮಾರು 100 ಮಂದಿ ಗುಂಪು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಗಾಜು ಜಖಂಗೊಂಡಿದೆ. ಶ್ರೀರಾಮಸೇನೆ ಕಾರ್ಯತ್ರರು ಹಲ್ಲೆ ಖಂಡಿಸಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ವಣವಾಗಿತ್ತು. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಹಲ್ಲೆಯಿಂದ ಪಿ.ಅರುಣ್, ವಿನೋದ್, ಗೌತಮ್ ಹಾಗೂ ರಮೇಶ್ರಾಜ್ಗೆ ಗಾಯಗಳಾಗಿದ್ದು, ಎಸ್ಸೆನ್ಸಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕಲ್ಲು ತೂರಾಟ ನಡೆಸಿದವರ ಬಂಧನಕ್ಕೆ ಒತ್ತಾಯಿಸಿ ದತ್ತಮಾಲಾಧಾರಿಗಳು, ಶ್ರೀರಾಮಸೇನೆ ಕಾರ್ಯಕರ್ತರು ನಗರಠಾಣೆ ಎದುರು ಪ್ರತಿಭಟನೆ ನಡೆಸಿದರು. ಎಫ್ಐಆರ್ ದಾಖಲಿಸಲಾಗಿದೆ, ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಪತ್ತೆಗೆ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿ ದಸ್ತಗಿರಿ ಮಾಡಲಾಗುವುದು ಎಂದು ಡಿವೈಎಸ್ಪಿಗಳಾದ ಗಿರಿ ಹಾಗೂ ರಮೇಶ್ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದು ಬೇರೆ ಬಸ್ನಲ್ಲಿ ದತ್ತಪೀಠಕ್ಕೆ ಪ್ರಯಾಣ ಬೆಳೆಸಿದರು. ಕಲ್ಲು ತೂರಾಟ ಸಂಬಂಧ ಪ್ರಮುಖ ಆರೋಪಿಗಳಾದ ರೂಷನ್ ಜಮೀರ್ (29) ಅಕ್ಟರ್ ಖಾನ್(32), ಮುಕ್ತಂ ಪಾಷಾ (28) ಅಬ್ಬಾಸ್ ಆಲಿ (26) ಮೊಹಮದ್ ನೌಷಿರ್ (29), ಶೋಯಿಬ್ ಸಿದ್ದಿಕ್ (30) ಸೇರಿ 10 ಜನರನ್ನು ಬಂಧಿಸಲಾಗಿದ್ದು, ಉಳಿದವರ ಹುಡುಕಾಟ ಮುಂದುವರಿದಿದೆ.
ಶ್ರೀರಾಮ ಸೇನೆ ದತ್ತಮಲಾ ಅಭಿಯಾನಕ್ಕೆ ತೆರೆ : ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಭಾನುವಾರ ದತ್ತಪೀಠದಲ್ಲಿ ಪಾದುಕೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ಹೋಮ ಹವನ ನಡೆಸುವ ಮೂಲಕ ದತ್ತಮಲಾ ಅಭಿಯಾನಕ್ಕೆ ತೆರೆಬಿದ್ದಿತು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬೆಳಗ್ಗೆ ನಗರದ ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ ದತ್ತಮಾಲೆ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಸೇರಿ ನೂರಾರು ಭಕ್ತರು ವಾಹನದಲ್ಲಿ ನಗರ ಪ್ರದಕ್ಷಿಣೆ ಹಾಕಿ ದತ್ತಪೀಠಕ್ಕೆ ತೆರಳಿದರು.