₹14,655 ಕೋಟಿ STRR ಯೋಜನೆ (STRR work in final stages) ಅಂತಿಮ ಹಂತದಲ್ಲಿ
ಮುಕ್ತಾಯದ ಹಂತದಲ್ಲಿರುವ ದೊಡ್ಡಬಳ್ಳಾಪುರ–ಹೊಸಕೋಟೆ ರಸ್ತೆ ಕಾಮಗಾರಿ ಹೊರವಲಯ ಸಂಚಾರಕ್ಕೆ ಹೊಸ ವೇಗ ಸಿಗಲಿದೆ
ಕರ್ನಾಟಕ ಮತ್ತು ತಮಿಳುನಾಡು ಸೇರಿ 288 ಕಿ.ಮೀ ರಸ್ತೆ ನಿರ್ಮಾಣ; ಎರಡು ಪ್ಯಾಕೇಜ್ಗಳ ಕಾಮಗಾರಿ ಈಗಾಗಲೇ ಸಂಪೂರ್ಣ
Bangalore: ರಾಜ್ಯ ರಾಜಧಾನಿ ಬೆಂಗಳೂರಿನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ (STRR work in final stages) ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (Satellite Town Ring Road – STRR) ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಬಹುತೇಕ ಹಂತಗಳನ್ನು ಪೂರ್ಣಗೊಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಯೋಜನೆಯ ಎರಡು ಪ್ಯಾಕೇಜ್ಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಇನ್ನೆರಡು ಪ್ಯಾಕೇಜ್ಗಳು ಅಂತಿಮ ಹಂತದಲ್ಲಿವೆ.

ಉಳಿದ ರಸ್ತೆ ಭಾಗಗಳ ಕಾಮಗಾರಿ ಕೂಡ ನಿಗದಿತ ವೇಳಾಪಟ್ಟಿಯಂತೆ (STRR work in final stages) ಪ್ರಗತಿಯಲ್ಲಿದ್ದು, ಯೋಜನೆ ಪೂರ್ಣಗೊಂಡ ಬಳಿಕ
ಬೆಂಗಳೂರಿನ ಹೊರವಲಯದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಂಡುಬರುವ ನಿರೀಕ್ಷೆ ವ್ಯಕ್ತವಾಗಿದೆ.
ಸುಮಾರು ₹14,655 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯ ಒಟ್ಟು ಉದ್ದ 288 ಕಿಲೋಮೀಟರ್ ಆಗಿದೆ. ಇದರಲ್ಲಿ 243 ಕಿಲೋಮೀಟರ್ ರಸ್ತೆ ಕರ್ನಾಟಕದಲ್ಲಿ
ಹಾಗೂ 45 ಕಿಲೋಮೀಟರ್ ರಸ್ತೆ ತಮಿಳುನಾಡಿನಲ್ಲಿ ನಿರ್ಮಾಣಗೊಳ್ಳುತ್ತಿದೆ. ಯೋಜನೆಯನ್ನು ಒಟ್ಟು ಆರು ಪ್ಯಾಕೇಜ್ಗಳಾಗಿ ವಿಂಗಡಿಸಿ ಕಾಮಗಾರಿ ಕೈಗೊಳ್ಳಲಾಗಿದೆ.
ಈಗಾಗಲೇ ದೊಡ್ಡಬಳ್ಳಾಪುರ–ದೊಡ್ಡಸ್ಪೇಟೆ ಬೈಪಾಸ್ (Doddaballapur – Dodda Pete Bypass) ಮತ್ತು ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ವೇಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾಗ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗಿದೆ.
ಇದರೊಂದಿಗೆ ಬೆಂಗಳೂರು ನಗರ ಪ್ರವೇಶಿಸದೆ ಹೊರವಲಯದಲ್ಲಿಯೇ ವಿವಿಧ ನಗರಗಳನ್ನು ಸಂಪರ್ಕಿಸುವ ವ್ಯವಸ್ಥೆ ರೂಪುಗೊಳ್ಳುತ್ತಿರುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.ಉಳಿದ ಪ್ರಮುಖ ವಿಭಾಗಗಳಲ್ಲಿಯೂ ಕಾಮಗಾರಿ ಅಂತಿಮ ಹಂತ ತಲುಪಿದೆ.
ದೊಡ್ಡಬಳ್ಳಾಪುರ–ಹೊಸಕೋಟೆ ನಡುವಿನ 38 ಕಿಲೋಮೀಟರ್ (Kilometer) ರಸ್ತೆ ಕಾಮಗಾರಿ ಶೇ.99.2ರಷ್ಟು ಪೂರ್ಣಗೊಂಡಿದ್ದು, ಇದು 2026ರ ನವೆಂಬರ್ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಅದೇ ರೀತಿ ಬೆಳಗೊಂಡಪಲ್ಲಿ–ಕರ್ನಾಟಕ ಗಡಿ (Belagondapalli–Karnataka border) ನಡುವಿನ 33.3 ಕಿಲೋಮೀಟರ್ ರಸ್ತೆ ಕಾಮಗಾರಿ ಶೇ.91.3ರಷ್ಟು ಪೂರ್ಣಗೊಂಡಿದ್ದು, ಸೆಪ್ಟೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಜೊತೆಗೆ ಓಬಳಾಪುರ–ಕುಣಿಗಲ್ (Obalapura–Kunigal) ಹಾಗೂ ಕುಣಿಗಲ್–ಎಸ್. ಮೂಡುಗಡಪಲ್ಲು ನಡುವಿನ ಹೊಸ ಆರು ಪಥದ ರಸ್ತೆ ನಿರ್ಮಾಣ ಪ್ರಸ್ತಾವನೆಗಳನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಮುಂದುವರಿಸುವ ಪ್ರಕ್ರಿಯೆಯೂ ಪರಿಶೀಲನೆಯಲ್ಲಿದೆ.
ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಕಾರ್ಯವೂ ಹಂತ ಹಂತವಾಗಿ ನಡೆಯುತ್ತಿದೆ. ಕರ್ನಾಟಕ ಭಾಗದ ಭೂಸ್ವಾಧೀನ ವೆಚ್ಚದ ಶೇ.30ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲು ಒಪ್ಪಿಕೊಂಡಿದ್ದು, ಈ ಭಾಗಕ್ಕೆ ಅಂದಾಜು ₹6,117 ಕೋಟಿ ವೆಚ್ಚವಾಗಲಿದೆ.
ಇದುವರೆಗೆ ರಾಜ್ಯ ಸರ್ಕಾರ ₹518.32 ಕೋಟಿ ಬಿಡುಗಡೆ ಮಾಡಿದೆ. ತಮಿಳುನಾಡಿನ ವ್ಯಾಪ್ತಿಯ 45 ಕಿಲೋಮೀಟರ್ ರಸ್ತೆ ಭಾಗಕ್ಕೆ ಸಂಬಂಧಿಸಿದ ಭೂಸ್ವಾಧೀನ ಸೇರಿದಂತೆ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ.
ಯೋಜನೆಗೆ ಅಗತ್ಯವಾದ ಭೂಮಿ, ಮೂಲಸೌಕರ್ಯ ಸ್ಥಳಾಂತರ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ವೇಗಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ವೇ ಯೋಜನೆಯ ಪ್ರಗತಿಯ ಕುರಿತೂ ಮಾಹಿತಿ ನೀಡಲಾಗಿದೆ. ಈ ಯೋಜನೆಯ ಬಹುತೇಕ ಪ್ಯಾಕೇಜ್ಗಳು ಪೂರ್ಣಗೊಂಡಿದ್ದರೂ,
ಅರಕ್ಕೋಣಂ–ಕಾಂಚೀಪುರಂ ನಡುವಿನ 25.5 ಕಿಲೋಮೀಟರ್ ರಸ್ತೆ ಕಾಮಗಾರಿ ಮಾತ್ರ ನ್ಯಾಯಾಂಗ ಹಾಗೂ ಗುತ್ತಿಗೆ ಸಂಬಂಧಿತ ಕಾರಣಗಳಿಂದ ಸ್ಥಗಿತಗೊಂಡಿದೆ.
ಗುತ್ತಿಗೆದಾರ ಸಂಸ್ಥೆಯ ಆರ್ಥಿಕ ಸಂಕಷ್ಟ, ಭೂಸ್ವಾಧೀನ ವಿಳಂಬ, ವಿದ್ಯುತ್ ಹಾಗೂ ಇತರೆ ಸಾರ್ವಜನಿಕ ಸೌಲಭ್ಯಗಳ ಸ್ಥಳಾಂತರ, ರೈಲ್ವೆ ಇಲಾಖೆಯ ಅನುಮತಿ ಸೇರಿದಂತೆ ಹಲವು ಆಡಳಿತಾತ್ಮಕ ಅಡಚಣೆಗಳು ಕಾಮಗಾರಿ ನಿಧಾನಗೊಳ್ಳಲು ಕಾರಣವಾಗಿವೆ.
ಆದಾಗ್ಯೂ, ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ದಿಸೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕ್ರಮ ಕೈಗೊಂಡಿದ್ದು, STRR ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಕೈಗಾರಿಕೆ, ಲಾಜಿಸ್ಟಿಕ್ಸ್ ಹಾಗೂ ಸುತ್ತಮುತ್ತಲಿನ ಉಪನಗರಗಳ ಸಂಪರ್ಕ ವ್ಯವಸ್ಥೆಗೆ ಮಹತ್ತರ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನು ಓದಿ : https://vijayatimes.com/hotel-owners-against-swiggy/