ಚಾಮರಾಜನಗರ, ಜೂ. 02: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ನಟ ನಟಿಯರು ಬಡವರ ನೆರವಿಗೆ ಧಾವಿಸಿದ್ದಾರೆ.
ಎಷ್ಟೋ ಕಡೆಗಳಲ್ಲಿ ಸರ್ಕಾರದ ನೆರವಿಗಿಂತ ಮೊದಲೇ ನಟ ನಟಿಯರು ನೆರವಿನ ಹಸ್ತ ಚಾಚಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಅದೇ ರೀತಿಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೂಡ ನೆರವು ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಜಿಲ್ಲೆಯ 40 ಕ್ಕೂ ಹೆಚ್ಚು ಮಕ್ಕಳಿರುವ ಪೃಥ್ವಿ ವಿಶೇಷ ಚೇತನರ ಶಾಲೆಗೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಸಹಾಯವನ್ನು ಮಾಡಿದ್ದಾರೆ.
ಇಲ್ಲಿನ ಮಾನಸಿಕ ವಿಶೇಷ ಚೇತನ ಶಾಲೆಯ ಮಕ್ಕಳಿರುವ ಕಟ್ಟಡ ಮಳೆ ಬಂದರೆ ಸೋರುತ್ತದೆ. ಲಾಕ್ಡೌನ್ ವೇಳೆ, ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದನ್ನು ಮನಗಂಡು ಸುದೀಪ್ ಟ್ರಸ್ಟ್ ನೆರವಿಗೆ ಧಾವಿಸಿದೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಈಗ ಗುಂಡ್ಲುಪೇಟೆಯಲ್ಲಿರುವ ಪೃಥ್ವಿ ವಿಶೇಷಚೇತನ ಮಕ್ಕಳ ಪಾಲಿಗೆ ಬೆಳಕಾಗುತ್ತಿದೆ.
ಮಂಗಳವಾರ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿತ್ತು. ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿ ವಸತಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಮಾಡಲೂ ನೆರವು ನೀಡುವ ಭರವಸೆ ನೀಡಿದ್ದಾರೆ.
ಈ ವಸತಿ ಶಾಲೆಯು ಬಾಡಿಗೆ ಕಟ್ಟಡದಲ್ಲಿದ್ದು ಅವಕಾಶ ಕೊಟ್ಟರೇ ಇದೇ ಕಟ್ಟಡವನ್ನು ದುರಸ್ತಿ ಮಾಡಿಸಲಾಗುವುದು. ಇಲ್ಲವೇ ಬೇರೆ ಕಟ್ಟಡ ನೋಡಿ ಶಾಲೆಯನ್ನು ಸ್ಥಳಂತಾರಿಸುವ ಕೆಲಸವನ್ನು ಚಾರಿಟೇಬಲ್ ಸೊಸೈಟಿ ಮಾಡಲಿದೆ. ಜತೆಗೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶಾಶ್ವತ ಪರಿಹಾರವೊಂದನ್ನು ಒದಗಿಸಲು ಚಿಂತನೆ ನಡೆದಿದೆ.
ಕಳೆದ ವಾರ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಕ್ಷಣವೇ ನೆರವಿಗೆ ಬಂದ ಕಿಚ್ಚನ ಚಾರಿಟೇಬಲ್ ಸೊಸೈಟಿ, ಚಿತ್ರದುರ್ಗದ ಮಂಗಳಮುಖಿಯರ ಮನೆಗೆ ದಿನಸಿ ಕಿಟ್ಗಳನ್ನು ವಿತರಿಸಿದ್ದಾರೆ.