New Delhi : ಒಂದು ಸಮುದಾಯದವರು ಮಾತ್ರ ಹಿಜಾಬ್(Hijab) ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಬರಲು ಬಯಸುತ್ತಾರೆ. ಆದರೆ ಇತರೆ ಎಲ್ಲ ಸಮುದಾಯದವರು ಶಿಕ್ಷಣ ಸಂಸ್ಥೆಗಳ ಡ್ರೆಸ್ ಕೋಡ್ ಅನ್ನು ಅನುಸರಿಸಲು ಸಿದ್ಧರಿದ್ದಾರೆ.

ಹೀಗಾಗಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವ ಕರ್ನಾಟಕ ಸರ್ಕಾರದ(Karnataka Government) ಆದೇಶವು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್(Supremecourt) ಹೇಳಿದೆ.
ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ದ್ವಿಸದಸ್ಯ ಪೀಠವು, “ಬಟ್ಟೆ ಧರಿಸುವ ಹಕ್ಕು ಮೂಲಭೂತ ಹಕ್ಕಾದರೆ, ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕು ಆಗುತ್ತದೆ… ಹಿಜಾಬ್ ಧರಿಸುವುದನ್ನು ಯಾರೂ ನಿಷೇಧಿಸುತ್ತಿಲ್ಲ.
ಇದನ್ನೂ ಓದಿ : https://vijayatimes.com/queen-elizabeth-ii-is-no-more/
ಶಾಲೆಯಲ್ಲಿ ಅದನ್ನು ಧರಿಸುವುದರ ಬಗ್ಗೆ ಪ್ರಶ್ನೆ ಇದೆ” ಎಂದು ಪೀಠವು ಉಡುಪಿಯ ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ ಹೇಳಿತು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ರಾಜ್ಯ ಸರ್ಕಾರವು ನಿರ್ದಿಷ್ಟವಾಗಿ ಉಲ್ಲೇಖಿಸಿದೆ ಎಂದ ಕಾಮತ್, ರಾಜ್ಯ ಸರ್ಕಾರವು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ವಾದಿಸಿದರು.
ಇದಕ್ಕೆ ಪೀಠವು ಪ್ರತಿಕ್ರಿಯಿಸಿ, “ಎಲ್ಲಾ ಇತರ ಸಮುದಾಯಗಳು ಡ್ರೆಸ್ ಕೋಡ್ ಅನ್ನು ಅನುಸರಿಸುತ್ತಿರುವಾಗ ಕೇವಲ ಒಂದು ಸಮುದಾಯವು ಹಿಜಾಬ್ ಅಥವಾ ತಲೆ ಸ್ಕಾರ್ಫ್ನೊಂದಿಗೆ ಬರಲು ಬಯಸುತ್ತದೆ. ಇದುವೇ ಸಮಸ್ಯೆಯ ಮೂಲವಾಗಿದೆ ಎಂದು ಹೇಳಿತು.

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ರುದ್ರಾಕ್ಷಿ ಮತ್ತು ಶಿಲುಬೆಯನ್ನು ಧರಿಸುತ್ತಾರೆ ಎಂದು ವಾದಿಸಲು ಕಾಮತ್ ಪ್ರಯತ್ನಿಸಿದರು. ಆದರೆ ಪೀಠವು ಮರುಪ್ರಶ್ನಿಸಿ, “ರುದ್ರಾಕ್ಷ ಅಥವಾ ಶಿಲುಬೆಯನ್ನು ಹೊರಗೆ ಧರಿಸುವುದಿಲ್ಲ. ಅದನ್ನು ನಿಮ್ಮ ಅಂಗಿಯ ಕೆಳಗೆ ಧರಿಸಲಾಗುತ್ತದೆ.
ನೀವು ಧರಿಸಿರುವುದನ್ನು ನೋಡಲು ನಿಮ್ಮ ಅಂಗಿಯನ್ನು ತೆಗೆಯಲು ಯಾರೂ ನಿಮ್ಮನ್ನು ಕೇಳುವುದಿಲ್ಲ ಮತ್ತು ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದು ವಸ್ತ್ರ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.