ತನಿಖೆ ಹೆಸರಿನ ಚಿತ್ರವೊಂದು ಈ ಹಿಂದೆಯೂ ತೆರೆಕಂಡಿತ್ತು. ಇದೀಗ ಅದೇ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ನಾಳೆ ರಾಜ್ಯಾದ್ಯಂತ 50 ಚಿತ್ರಮಂದಿರಗಳಲ್ಲಿ ತೆರೆಕಾತ್ತಿದೆ. ಚಿತ್ರಕ್ಕೆ ನಿರ್ದೇಶಕರಾಗಿರುವ ಜಿ.ಎಸ್ ಕಲಿಗೌಡ ಅವರೇ ಖುದ್ದಾಗಿ ನಿರ್ಮಾಣವನ್ನು ಮಾಡಿದ್ದು ಹಾಡುಗಳನ್ನು ರಚಿಸಿದ್ದಾರೆ.
ವರ್ಷಗಳ ಹಿಂದೆ ಕನಕಪುರದಲ್ಲಿ ನಡೆದ ಘಟನೆಯನ್ನು ಆಧಾರವಾಗಿರಿಸಿಕೊಂಡು ತನಿಖೆ ಚಿತ್ರದ ಕಥಾ ಹಂದರ ಹೆಣೆದಿರುವ ನಿರ್ದೇಶಕರು ಆರು ಮಂದಿ ಹಳ್ಳಿಯ ಸ್ನೇಹಿತರು ಮತ್ತು ಒಬ್ಬ ಯುವತಿಯ ನಡುವೆ ನಡೆದಂಥ ಕತೆಯನ್ನೇ ಚಿತ್ರ ಮಾಡಿದ್ದಾರೆ. ಪ್ರೀತಿಯ ವಿಚಾರದಲ್ಲಿ ಸ್ನೇಹಿತರ ನಡುವೆ ಉಂಟಾಗುವ ಭಿನ್ನಾಭಿಪ್ರಾಯ ಊರು ಬಿಡುವಂತೆ ಮಾಡುತ್ತದೆ. ಆನಂತರ ಏನು ನಡೆಯುತ್ತದೆ ಎನ್ನುವುದಕ್ಕೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ನೀಡಲಾಗಿದೆ ಎಂದು ನಿರ್ದೇಶಕರು ಹೇಳುತ್ತಾರೆ.
ನೌಇನ್ ಸಜ್ಜು ಹಾಡಿರುವ “ಎಣ್ಣೆ ಹೊಡೆಯೋದಾ… ಹೆಂಡ್ತಿ ಬಿಡೋದಾ..” ಎನ್ನುವ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಚಿತ್ರದ ನಾಯಕ ಆರ್ ಡಿ ಅನಿಲ್ ಸಿನಿಮಾದ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ. ನಾಯಕಿ ಚಂದನಾ ಹೈಸ್ಕೂಲ್ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ಸಂತೋಷ್ ವಿಜಯ ಕುಮಾರ್, ಮಚ್ ಮುನಿರಾಜು, ಗುಲ್ಷನ್, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಮೊದಲಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮೈಸೂರು, ಪಾಂಡವಪುರ, ಕನಕಪುರ, ರಾಮನಗರ ಮತ್ತು ಚೆನ್ನಪಟ್ಟಣ ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಕ್ರಿಸ್ಟೋಫರ್ ಲೀ ಅವರ ಸಂಗೀತದ ನಾಲ್ಕು ಹಾಡುಗಳನ್ನು ಸಂತೋಷ್ ವೆಂಕಿ, ಚಿಂತನ್ ವಿಕಾಸ್, ನವೀನ್ ಸಜ್ಜು, ವಾಣಿ ಹರಿಕೃಷ್ಣ ಹಾಡಿದ್ದಾರೆ. ಶ್ಯಾಮ್ ಸಿಂಧನೂರು ಚಿತ್ರದ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸಮೀವುಲ್ಲ, ಹರ್ಷಿತಾ ಚೆನ್ನು ಚಿತ್ರದ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.