ಇದು ಕರುನಾಡಿನ ರೈತನ ಆಕ್ರೋಶ. ಇದಕ್ಕೆ ಮುಖ್ಯ ಕಾರಣ ಕರುನಾಡಿನ ಎಪಿಎಂಸಿಯಲ್ಲಿ ತಾಂಡವಾಡುತ್ತಿರೋ ಭ್ರಷ್ಟಾಚಾರ. ಎಪಿಎಂಸಿ ಅಧಿಕಾರಿಗಳಿಗೆ ರೈತನಂದ್ರೆ ತಾತ್ಸಾರ. ರೈತ ಬೆಳೆದ ಬೆಳೆ ಅಂದ್ರೆ ಇವರಿಗೆ ಕಾಲಕಸ. ದುರಂತ ಅಂದ್ರೆ, ಸರ್ಕಾರ ಕೊಡೋ ಬೆಂಬಲ ಬೆಲೆ ಪಡೆಯಲು ರೈತರು ಈ ಭ್ರಷ್ಟ ಅಧಿಕಾರಿಗಳಿಗೆ ಸಾವಿರಾರು ರೂಪಾಯಿ ಲಂಚ ಕೊಡಬೇಕು. ಅದ್ರಲ್ಲೂ ಈಗ ರಾಗಿ ಖರೀದಿಯ ಸೀಸನ್. ರಾಗಿ ಮಾರಾಟ ಮಾಡಲು ಬರೋ ರೈತರನ್ನು ಅಧಿಕಾರಿಗಳು ಲೂಟಿ ಮಾಡ್ತಿದ್ದಾರೆ ಅನ್ನೋ ದೂರು ವಿಜಯಟೈಮ್ಸ್ ಕವರ್ಸ್ಟೋರಿ ತಂಡಕ್ಕೆ ಸಿಕ್ತು. ಈ ದೂರಿನ ಬೆನ್ನತ್ತಿ ಹೊರಟಿತು ನಮ್ಮ ತಂಡ.
ನಾವು ಕುಣಿಗಲ್ ಎಪಿಎಂಸಿ ಯಾರ್ಡ್ಗೆ ಹೋದಾಗ ಅಲ್ಲಿ ರೈತರ ಆಕ್ರೋಶ ಮುಗಿಲುಮುಟ್ಟಿತು. ಅಲ್ಲಿ ದಲ್ಲಾಳಿಗಳ ಆಟ, ಅಧಿಕಾರಿಗಳ ಲಂಚದಾಟ ಭರ್ಜರಿಯಾಗಿ ನಡೆಯುತ್ತಿತ್ತು. ರೈತರ ರಾಗಿಯ ಗುಣಮಟ್ಟ ಪರೀಕ್ಷೆ ಮಾಡುವವನಿಗೆ ೨೦೦೦ ಸಾವಿರ ರೂಪಾಯಿ, ತೂಕ ಮಾಡುವವನಿಗೆ ಲಾಟ್ಗೆ ನೂರರಿಂದ ಇನ್ನೂರು ರೂಪಾಯಿ, ಲೋಡ್ ಮಾಡುವವನಿಗೆ ಐನ್ನೂರು ರೂಪಾಯಿ ಹೀಗೆ ಹಂತ ಹಂತವಾಗಿ ಲಂಚ ಕೊಡಬೇಕು. ಇಲ್ಲಿ ರೈತರು ಅಸಹಾಯಕರಾಗಿ ತಮ್ಮ ಮೇಲಾಗುತ್ತಿರೋ ದೌರ್ಜನ್ಯವನ್ನು ಸಹಿಸಿ ಲಂಚ ಕೊಡುತ್ತಿದ್ದಾರೆ. ಈ ಬಗ್ಗೆ ವಿಜಯಟೈಮ್ಸ್ ರೈತರ ಪರವಾಗಿ ದನಿ ಎತ್ತಲೇ ಬೇಕು ಅಂತ ಫೀಲ್ಡ್ಗೆ ಇಳಿದೇ ಬಿಟ್ವಿ. ಅಲ್ಲಿ ರೈತರ ನೋವನ್ನು ಆಲಿಸಿದ್ವಿ. ಇದು ನಮ್ಮ ಕರುನಾಡಿನ ರೈತರ ಮೇಲಾಗುತ್ತಿರೋ ಶೋಷಣೆ. ನಿತ್ಯ ರೈತ ಅವಮಾನ ಸಹಿಸಿಕೊಂಡು, ಸ್ವಾಭಿಮಾನ ಕಳೆದುಕೊಂಡು ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಬೇಕಾಗಿದೆ. ಆದ್ರೆ ಇದೆಲ್ಲಾ ನಮ್ಮ ಕೃಷಿ ಸಚಿವರಿಗೆ, ಜನಪ್ರತಿನಿಧಿಗಳಿಗೆ ಕಾಣಲ್ಲ.