ಮೈಸೂರು, ಜೂ. 10: ರೋಹಿಣಿ ಸಿಂಧೂರಿ ವರ್ಗಾವಣೆಗೆ ಭೂ ಮಾಫಿಯಾವೇ ನೇರ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಈಗ ಇದಕ್ಕೆ ಸಂಬಂಧಿಸಿದಂತೆ, ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಒಂದು ಆಡಿಯೋ ವೈರಲ್ ಆಗಿದೆ. ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ನಡುವಿನ ಜಗಳ ತಾರಕಕ್ಕೇರಿದಾಗ ಸರ್ಕಾರ ವರ್ಗಾವಣೆ ಅಸ್ತ್ರವನ್ನು ಪ್ರಯೋಗಿಸಿತ್ತು. ರೋಹಿಣಿ ಸಿಂಧೂರಿ ಒಲ್ಲದ ಮನಸ್ಸಿನಿಂದಲೇ ಮೈಸೂರಿಗೆ ಭಾವುಕ ವಿದಾಯ ಹೇಳಿದ್ದರು. ಇದಾದ ಬಳಿಕ ಸಿಂಧೂರಿ ವರ್ಗಾವಣೆ ಹಿಂದೆ ಭೂ ಮಾಫಿಯಾ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಜನಪ್ರತಿಧಿಗಳ ಕೈವಾಡವೂ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಇದಕ್ಕೆ ಪೂರಕ ಎನ್ನುವಂತೆ ರೋಹಿಣಿ ಸಿಂಧೂರಿ ಅವರ ಆಡಿಯೋ ಒಂದು ವೈರಲ್ ಆಗಿದೆ.
ಇದರಲ್ಲಿ ಮಾತನಾಡಿರುವ ರೋಹಿಣಿ ಸಿಂಧೂರಿ, ನಾನು ಭೂ ಮಾಫಿಯಾ ವಿರುದ್ಧ ಹೋರಾಡಿದಕ್ಕೆ ವರ್ಗಾವಣೆ ಭಾಗ್ಯ ಸಿಕ್ಕಿತು. ಮೈಸೂರಿನಲ್ಲಿ ಭೂ ಮಾಫಿಯಾವನ್ನು ಒಂದು ಪ್ರವೃತ್ತಿ ಮಾಡಿಕೊಂಡು ಬಂದಿದ್ದಾರೆ. ಈ ಸಣ್ಣ ಸಣ್ಣ ರಾಜಕಾರಣಿಗಳು ಈ ಪ್ರವೃತ್ತಿ ಮಾಡ್ಕೊಂಡಿದ್ದಾರೆ. ಸಾರಾ ಮಹೇಶ್, ರಾಜೀವ್ ಇಂತವರೆಲ್ಲರದ್ದು ಇದೇ ಪ್ರವೃತ್ತಿ ಎಂದು ಜನಪ್ರತಿನಿಧಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಅಧಿಕಾರಿಗಳನ್ನ ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳೋದು. ಇದೀಗ ಸುದ್ದಿಗೋಷ್ಠಿ ಮಾಡಿಕೊಂಡು ಹೆಸರಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಆಮಿಷ ತೋರಿಸುವ ಪ್ರವೃತ್ತಿ ಬೆಳೆಸಿಕೊಂಡು ಬಂದಿದ್ದಾರೆ ಎಂದು ನೇರವಾಗಿಯೇ ಸಾರಾ ಮಹೇಶ್ ಹಾಗೂ ರಾಜೀವ್ ವಿರುದ್ಧ ಸಿಂಧೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 ವರ್ಷದಿಂದ ಇವರು ಎಲ್ಲಿದ್ದರು? ಈಗ ಎಲ್ಲಿದ್ದಾರೆ ಗೊತ್ತಲ್ವಾ? ಏನ್ ಮಾಡಿ ಬಂದಿದ್ದಾರೆ? ಏನ್ ಇಂಡಸ್ಟ್ರಿ ಮಾಡಿದ್ದಾರೆ. ಇವರ ಪರಿಶ್ರಮ ಏನು? ಇದೆಲ್ಲವೂ ನಮ್ಮ ಗಮನಕ್ಕೆ ಬಂದಿದೆ. ಇದು ಇಷ್ಟು ಮಟ್ಟದಲ್ಲಿ ಇದೆಯಾ ಎಂದು ನನಗೆ ಆಶ್ಚರ್ಯ ಆಯ್ತು. ನಾನು ಡಿಸಿಯಾಗಿ ಬಂದಾಗ ದಸರಾ ಇತ್ತು, ಕೊರೋನಾ ಇತ್ತು. ಬಳಿಕ ಎರಡನೇ ಅಲೆ ಬಂತು. ಈ ಮಧ್ಯೆ ಭೂ ಅಕ್ರಮದ ಮಾಹಿತಿ ಹೊರ ತೆಗೆಯಲು ಆಗಿಲ್ಲ. ಕೋವಿಡ್ ಎರಡನೇ ಹಂತದ ಕೊನೆಯಲ್ಲಿ ಇದರ ದಾಖಲಾತಿ ತೆಗೆದೆ. ಆದರೆ ಅಷ್ಟರಲ್ಲೇ ನನ್ನನ್ನು ವರ್ಗಾವಣೆ ಮಾಡಿಸಿದರು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದಕ್ಕೆ ರಾಜೀವ್ ಹಾಗೂ ಸಾರಾ ಮಹೇಶ್ ನೇರ ಕಾರಣ ಎಂದು ರೋಹಿಣಿ ಸಿಂಧೂರಿ ಗಂಭೀರ ಆರೋಪ ಮಾಡಿದ್ದಾರೆ. ಇವರಿಬ್ಬರೂ ಲಿಂಗಾಬುದಿ ಕೆರೆಯ ಬಳಿ ಎರಡು ಎಕರೆಗೆ ಪಾರ್ಟನರ್ ಆಗಿದ್ದಾರೆ. ಅಲ್ಲಿ ಫೈವ್ ಸ್ಟಾರ್ ಹೋಟೆಲ್ ಕಟ್ಟುವುದಕ್ಕೆ ಸಿದ್ದತೆ ನಡೆಸುತ್ತಿದ್ರು. ಅದಕ್ಕೆ ಇವರಿಬ್ಬರೂ ಕೂಡ ಪಾರ್ಟನರ್ ಆಗಿದ್ದಾರೆ. ಇದನ್ನೆಲ್ಲ ನಾನು ಬಹಿರಂಗ ಮಾಡಿದ್ದಕ್ಕೆ ನನ್ನ ವರ್ಗಾವಣೆ ಮಾಡಿಸಿದ್ರಲ್ಲ. ಇದನ್ನ ಹೇಗೆ ಕಂಟ್ರೋಲ್ ಮಾಡ್ಬೇಕು ಅಂದ್ರೆ, ಇಬ್ಬರಿಗೂ ಶಿಕ್ಷೆ ಕೊಟ್ಟು ಕಳುಹಿಸಬೇಕು ಎಂದು ರೋಹಿಣಿ ಸಿಂಧೂರಿ ಕಿಡಿಕಾರಿದ್ದಾರೆ.ಆಕ್ಸಿಜನ್ ದುರಂತದಲ್ಲಿ ನಮ್ಮ ಪಾತ್ರ ಇಲ್ಲ ಅಂತ ಗೊತ್ತಾಯ್ತು. ಇದಾದ ಮೇಲೆ ಬೇರೆ ಬೇರೆ ರಿಮಿಕ್ಸ್ ಆಡಿಯೋ ಶುರು ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಾರಾ ಮಹೇಶ್ ನನಗೆ ದಾಖಲೆ ಕೊಡಿ ಎಂದ್ರು. ಅವರು ಕೇಳಿದ ಮೇಲೆ ದಾಖಲೆ ಕೊಡದಿದ್ರೆ ಹೇಗೆ? ಅದಕ್ಕೆ ಸಾರಾ ಮಹೇಶ್ ಕೇಳಿದ ದಾಖಲೆ ಕೊಟ್ಟಿದ್ದೇನೆ. ಬೇರೆಯವರು ಕೇಳಿದ್ದರೂ ದಾಖಲೆ ಕೊಡುತ್ತಿದ್ದೆ. ರಾಜೀವ್ದು ಇದೆ, ಅವನು ಸೈಲೆಂಟ್ ಆಗಿ ಕೆಲಸ ಮಾಡ್ಕೊಂಡು ಹೋಗ್ತಿದ್ದಾನೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸುದ್ದಿಗೋಷ್ಠಿ ಎಲ್ಲಾ ಬೇಕಿತ್ತಾ? ವಾಕ್ಸಿನ್ನೇಷನ್ನಲ್ಲಿ ಮೈಸೂರು ಮೊದಲು ಇದೆ. ಕೊರೋನಾ ನಿರ್ವಹಣೆ ಸಹ ಮಾಡ್ತಿದೆ. ಅವರಿಗೆ ಅಷ್ಟೊಂದು ಭಯ ಇತ್ತು ಈ ಪ್ರಕರಣ ಹೊರಗೆ ಬರುತ್ತೆ ಅಂತ. ಆಮೇಲೆ ಏನು ಮಾಡಲು ಆಗಲ್ಲ ಅಂತ, ಹೀಗೆ(ವರ್ಗಾವಣೆ) ಮಾಡಿರೋದು ಎಂದು ರೋಹಿಣಿ ಸಿಂಧೂರಿ ಮಾತನಾಡಿರೋ ಆಡಿಯೋ ವೈರಲ್ ಆಗಿದೆ.