ಮಂಡ್ಯ,ಜೂ.29ಮನ್ಮುಲ್ ಹಗರಣ ಮುಚ್ಚಿ ಹಾಕಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಸಿಎಂ ಜೊತೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರುತ್ತೇನೆ. ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಮಂಡ್ಯ ಜಿಲ್ಲೆಯಲ್ಲಿದ್ದಾರೆ ಎಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ನಾನು, ದೇವೇಗೌಡರು ಸಿಎಂ ಜೊತೆ ಮಾತನಾಡಿದ್ದೇವೆ. ನೀವು ಯಾವ ತನಿಖೆಯಾದರೂ ಮಾಡಿಕೊಳ್ಳಿ. ಹಗರಣ ಬಯಲಿಗೆಳೆದ ಆಡಳಿತ ಮಂಡಳಿ ವಿರುದ್ಧವೇ ಕ್ರಮ ಯಾಕೆ ಎಂದು ಸಿಎಂಗೆ ಹೇಳಿದ್ದೇವೆ. ನನ್ನ ಬಡ್ಡಿ ಮಗ ಎನ್ನುತ್ತಾರಲ್ಲ, ಅವರು ನಮಗೆ ಬಡ್ಡಿ ಕೊಡುವುದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ ಎಂದು ಗರಂ ಆಗಿ ಹೇಳಿದರು.
ನಾನೇ ಸಿಎಂಗೆ ಹೇಳಿ ಟೈಮ್ ನಿಗದಿ ಮಾಡ್ತೀನಿ. ಈ ವಯಸ್ಸಿನಲ್ಲಿ
ದೇವೇಗೌಡರು ಯಾಕೆ ಆ ಮಾಹಾನುಭಾವನೇ ಕರೆದುಕೊಂಡು ಹೋಗಲಿ. ಹಗರಣ ಹೊರತಂದಿದ್ದೇ ಈ ಆಡಳಿತ ಮಂಡಳಿ. ಇವರಿಗೆ ಮಾನ ಮರ್ಯಾದೆ ಇದ್ದರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ. ಇವರ ಅಪ್ಪಣೆ ತಗೊಂಡು ನಾನು ಮಂಡ್ಯಕ್ಕೆ ಬರಬೇಕಿಲ್ಲ ಎಂದು ಕಿಡಿಕಾರಿದರು.
ನನ್ನ ಜನ ಬಡವರಿದ್ದಾರೆ, ಈ ಜಿಲ್ಲೆಯ ಜನರು ನನಗೆ ಋಣ ಹೊರಿಸಿದ್ದಾರೆ. ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಇಲ್ಲಿದ್ದಾರೆ. ಜೀವ ಮಣ್ಣಿಗೋಗೊವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ. ಮಾತನಾಡುವಾಗ ಎಚ್ಚರಿಕೆ ಇರಲಿ. ಏನ್ ಇವರ ಋಣ ತಿಂದಿದ್ದವಾ, ಹಲ್ಲು ಹಿಡಿದು ಮಾತನಾಡಲಿ. ಸೋತು ಮನೆಯಲ್ಲಿ ಮಲಗಿದ್ದಾಗ ಎಂಪಿ ಮಾಡಿದೆ. ಸ್ವಂತ ದುಡಿಮೆಯಲ್ಲಿ ಪಾರ್ಲಿಮೆಂಟ್ ಗೆ ಹೋಗಿದ್ದರೆ ಇವರು ಎಂದು ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಹೆಚ್ಡಿಕೆ ವಾಗ್ದಾಳಿ ನಡೆಸಿದರು.