ಅಸ್ಸಾಂ, ಏ,04 : ಅಸ್ಸಾಂ ಜನರು ಅಭಿವೃದ್ಧಿ, ಶಾಂತಿ, ಐಕ್ಯತೆ, ಸ್ಥಿರತೆಯನ್ನು ಬಯಸುತ್ತಿದ್ದಾರೆ. ಅವರಿಗೆ ಹಿಂಸೆ ಬೇಕಾಗಿಲ್ಲ. ಹೀಗಾಗಿ ಅವರು ಖಂಡಿತ ಎನ್ಡಿಎ ಒಕ್ಕೂಟದ ಸರ್ಕಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ತಮುಲ್ಪುರದಲ್ಲಿ ಚನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಮೋದಿ, ಬಿಜೆಪಿ ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ, ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತಿದೆ. ಆದರೆ ಕೆಲವರು ಮತಕ್ಕಾಗಿ ದೇಶವನ್ನು ಒಡೆಯುತ್ತಿದ್ದಾರೆ. ದುರದೃಷ್ಟವೆಂದರೆ ಅದನ್ನೇ ಜಾತ್ಯತೀತತೆ ಎಂದೂ ಕರೆಯಲಾಗುತ್ತದೆ. ಬಿಜೆಪಿಗೆ ಕೋಮುವಾದಿ ಪಕ್ಷ ಎಂಬ ಹಣೆಪಟ್ಟಿ ಸಿಕ್ಕಿದೆ. ಈ ಜಾತ್ಯತೀತತೆ, ಕೋಮುವಾದಗಳೆಂಬ ಆಟ ದೇಶಕ್ಕೆ ಮಾರಕವಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಭಾರತ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ಹೊತ್ತಲ್ಲಿ ನೀವು ಚಲಾಯಿಸುವ ಮತ, 100ನೇ ವರ್ಷದ ಸ್ವಾತಂತ್ರ್ಯೋತ್ಸವದ ವೇಳೆ ಅಸ್ಸಾಂನ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿದ ಮೋದಿ, ಕಾಂಗ್ರೆಸ್ನ ಮೈತ್ರಿ ಪಕ್ಷವಾದ ಎಐಯುಡಿಎಫ್ ಸಂಸ್ಥಾಪಕ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ಪುತ್ರ, ಅಬ್ದುರ್ ರಹೀಂ ಮಾತಿಗೆ ಖಡಕ್ ತಿರುಗೇಟು ನೀಡಿದರು.
ಶುಕ್ರವಾರ ಮಾತನಾಡಿದ್ದ ಅಬ್ದುರ್ ರಹೀಮ್, ಈ ಬಾರಿ ಅಸ್ಸಾಂನಲ್ಲಿ ದಾಡಿ, ಲುಂಗಿ, ಟೋಪಿವಾಲಾಗಳು ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಹೇಳಿದರು. ಇಂದು ಅದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ, ಅಬ್ದುರ್, ಅಸ್ಸಾಂ ಜನರಿಗೆ ಬಹುದೊಡ್ಡ ಅವಮಾನ ಮಾಡಿದ್ದಾರೆ. ಅಸ್ಸಾಂನ ಗೌರವ, ಘನತೆಗೆ ಅವಮಾನ ಮಾಡಿದ್ದನ್ನು ನಾನು ಸಹಿಸುವುದಿಲ್ಲ. ಈ ಧೋರಣೆಗೆ ಅಸ್ಸಾಮಿಗರು ಖಂಡಿತ ಕಟು ತಿರುಗೇಟು ನೀಡುತ್ತಾರೆ ಎಂದು ಹೇಳಿದರು. ಹಾಗೇ, ಅಸ್ಸಾಂನ ಉಗ್ರರಿಗೆ ಬಂದು ಶರಣಾಗುವಂತೆ ಕರೆ ಕೊಟ್ಟರು. ನೀವೂ ಮುಖ್ಯವಾಹಿನಿಗೆ ಬನ್ನಿ, ಆತ್ಮ ನಿರ್ಭರ ಅಸ್ಸಾಂ ನಿರ್ಮಾಣಕ್ಕಾಗಿ ದುಡಿಯಿರಿ ಎಂದರು.