ನವದೆಹಲಿ, ಮಾ. 23: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಲ ವಿನಾಯಿತಿ ಅವಧಿಯನ್ನು ಆರು ತಿಂಗಳು ವಿಸ್ತರಿಸಬೇಕು ಎಂದು ಕೋರಿ ವಿವಿಧ ವಾಣಿಜ್ಯ ಒಕ್ಕೂಟಗಳು ಹಾಗೂ ಕಾರ್ಪೊರೇಟ್ಗಳು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಇದರ ಜತೆಗೆ ವಿನಾಯಿತಿ ಅವಧಿಯ ಬಡ್ಡಿಯ ಸಂಪೂರ್ಣ ಮನ್ನಾ ಕೂಡ ಸಾಧ್ಯವಿಲ್ಲ ಎಂದು ತಿಳಿಸಿದೆ. ಯಾವುದೇ ಹಣಕಾಸು ಪ್ಯಾಕೇಜ್ ಅಥವಾ ಪರಿಹಾರ ನೀಡುವಂತೆ ಸರ್ಕಾರಕ್ಕಾಗಲೀ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಾಗಲೀ ನಿರ್ದೇಶನ ನೀಡುವುದು ಸಾಧ್ಯವಿಲ್ಲ. ಇನ್ನು ನಿರ್ದಿಷ್ಟ ವಲಯಗಳಿಗೆ ಪರಿಹಾರ ನೀಡುವಂತೆ ಸಹ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಂ.ಆರ್.ಶಾ, ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು ಸಾಲ ವಿನಾಯಿತಿ ಮತ್ತು ಬಡ್ಡಿ ಮನ್ನಾ ಕುರಿತು ತೀರ್ಪನ್ನು ಘೋಷಿಸಿದರು. ಇನ್ನು ಮಂಗಳವಾರದಂದು ಸುಪ್ರೀಂ ಕೋರ್ಟ್, ವಿನಾಯಿತಿ ಸಂದರ್ಭದಲ್ಲಿ ಸಾಲ ಬಾಕಿ ಉಳಿಸಿಕೊಂಡವರಿಗೆ ಬಡ್ಡಿಯ ಮೇಲೆ ಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.