ನವದೆಹಲಿ, ಫೆ. 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಎರಡನೇ ಬಾರಿಗೆ ಮಹತ್ವದ ಕೇಂದ್ರ ಯುನಿಯನ್ ಬಜೆಟ್ ಮಂಡಿಸಿದ್ದಾರೆ. ಕೊರೋನಾ ನಂತರದ ಮೊದಲ ಬಜೆಟ್ ಎಂಬ ಕಾರಣಕ್ಕೆ ಈ ವರ್ಷದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಈ ಬಾರಿಯೂ ಬಜೆಟ್ನಲ್ಲಿ ತೈಲ ಮತ್ತು ಮಧ್ಯದ ಮೇಲಿನ ತೆರಿಗೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಅದರಲ್ಲೂ ತೈಲ ಬೆಲೆ ದಿಢೀರ್ ಏರಿಕೆಯ ವಿರುದ್ಧ ಜನಸಾಮಾನ್ಯರು ಕೆಂಡಾಮಂಡಲರಾಗಿದ್ದಾರೆ.
ಆದರೆ, ಈ ಕುರಿತು ಬಜೆಟ್ ಮಂಡನೆ ನಂತರ ಪ್ರತಿಕ್ರಿಯೆ ನೀಡಿದ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್, “ಕೇಂದ್ರ ಬಜೆಟ್ 2021ರಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಾಕಷ್ಟು ಹಣವನ್ನು ಮಂಜೂರು ಮಾಡಲಾಗಿದೆ. ಹೀಗಾಗಿ ಕೃಷಿ ಸೆಸ್ ಹೆಸರಿನಲ್ಲಿ ಪಟ್ರೋಲ್ ಪ್ರತಿ ಲೀಟರ್ಗೆ 2.5 ರೂ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 4 ರೂ ತೆರಿಗೆಯನ್ನು ಏರಿಸಲಾಗಿದೆ. ಆದರೆ, ಇದರಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ” ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಿರ್ಮಲಾ ಸೀತಾರಾಮನ್, “ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಹೇರಲಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ) ದರಗಳನ್ನು ಕಡಿಮೆ ಮಾಡಲಾಗುವುದು. ಇದರಿಂದ ಒಟ್ಟಾರೆಯಾಗಿ ಗ್ರಾಹಕರಿಗೆ ಯಾವುದೇ ಹೊರೆಯಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.