ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಜನರಿಗೆ ಮನರಂಜನೆ ನೀಡುವುದಲ್ಲದೆ, ಕನ್ನಡ ಚಿತ್ರಗಳನ್ನು ಬೆಳೆಸುವ ನಿಟ್ಟಿನಲ್ಲಿ, ಕನ್ನಡ ಸಿನಿಮಾಗಳ ಬೆಳವಣಿಗೆಗೆ ಹೆಚ್ಚು ಪುಷ್ಠಿ ನೀಡುವಲ್ಲಿ ಸಹಕಾರಿಯಾಗಿ ನಿಂತಿದೆ ಎಂದರೆ ತಪ್ಪಾಗಲಾರದು. ಈ ಕ್ಷಣದಲ್ಲಿ ಚಿತ್ರಮಂದಿರಗಳು ಕನ್ನಡ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಹತ್ತಿರವಾಗಿ ಅವರನ್ನು ಮನರಂಜನೆಯ ಕಡಲಲ್ಲಿ ತೇಲಿಸುವ ದೋಣಿಯಾಗಿದೆ. ಆದರೆ ಇಂದು ಅದೇ ಮನರಂಜನೆಯ ಮನೆಯಾಗಿದ್ದ ಚಿತ್ರಮಂದಿರಗಳು ತಾತ್ಕಾಲಿಕವಾಗಿ ಮುಚ್ಚುವಂತ ಪರಿಸ್ಥಿತಿ ಎದುರಾಗಿರುವುದು ನಿಜಕ್ಕೂ ಬೇಸರ ತಂದಿದೆ.
ಮೈಸೂರಿನ ಪ್ರಮುಖ ಚಿತ್ರಮಂದಿರಗಳು ಈಗ ಮುಚ್ಚಲು ಮುಂದಾಗಿದ್ದು, ಇದಕ್ಕೆ ಒದಗಿರುವ ಪ್ರಮುಖ ಕಾರಣವನ್ನು ಕೂಡ ಬಹಿರಂಗಪಡಿಸಿದೆ. ಮಹಾಮಾರಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ವೇಗವಾಗಿ ಹಬ್ಬುತ್ತಿರುವ ಕಾರಣ, ಈಗಾಗಲೇ ಸರ್ಕಾರ ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಹೇರಿದೆ. ಈ ನಿಯಮ ಅನುಸಾರ ಯಾವುದೇ ರೀತಿಯ ವಹಿವಾಟು, ಜನಸಂದಣಿ ಇರುವಂತಿಲ್ಲ. ಈ ರೀತಿ ನಡೆದಾಗ ಜನರು ಹೆಚ್ಚಾಗಿ ಹೊರಬರುವಂತಿಲ್ಲ ಮತ್ತು ಬೆರಳೆಣಿಕೆಯಷ್ಟು ಜನ ಮಾತ್ರ ಅಗತ್ಯವಿದ್ದರೆ ಹೊರಬರುತ್ತಾರೆ. ಸದ್ಯ ಇದೇ ಹಾದಿಯನ್ನು ಸರ್ಕಾರ ಅನುಸರಿಸಿದರೆ ನಷ್ಟದಿಂದ ನಾವು ಚಿತ್ರಮಂದಿರವನ್ನು ನಡೆಸಬೇಕು ಮತ್ತು ಮುಚ್ಚಬೇಕಿರುವ ಅನಿವಾರ್ಯತೆ ಎದುರಾಗಿದೆ ಎಂದು ಮೈಸೂರಿನ ಚಿತ್ರಮಂದಿರಗಳ ಮಾಲಿಕರ ಸಂಘದ ಅಧ್ಯಕ್ಷರಾದ ರಾಜಾರಾಂ ಅವರು, ಸರ್ಕಾರ ನೈಟ್ ಕರ್ಫ್ಯೂ ನಿಯಮ ಬದಲಿಸದಿದ್ದರೆ ಖಂಡಿತವಾಗಿ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ಹೇಳಿದ್ದಾರೆ.
ಈ ಕಾರಣದಿಂದಲೇ ಮೈಸೂರಿನ ಪ್ರಮುಖ ಚಿತ್ರಮಂದಿರಗಳಾದ ಗಾಯತ್ರಿ, ಸರಸ್ವತಿ, ಲಿಡೋ, ರಾಜ್ಕಮಲ್, ಸ್ಟೆರ್ಲಿಂಗ್, ಸಂಗಮ್ ಸೇರಿದಂತೆ ಕೆಲ ಚಿತ್ರಮಂದಿರಗಳಲ್ಲಿ ಜನವರಿ 21ರ ನಂತರ ಕನ್ನಡ ಸೇರಿದಂತೆ ಯಾವುದೇ ಬಾಷೆಯ ಸಿನಿಮಾಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರ ಶೀಘ್ರವೇ ನೈಟ್ ಕರ್ಫ್ಯೂ ತೆಗೆದು ಹಾಕುವುದು ಒಳ್ಳೆಯದು.! ನಾವು ಕೋವಿಡ್ ಎಲ್ಲಾ ನಿಯಮಗಳನ್ನು ಅನುಸರಿಸಿದರೂ ಕೂಡ ವೀಕೆಂಡ್ ಕಫ್ರ್ಯೂ ಮಾಡಿದ್ದಾರೆ.
ನಮಗೆ ವಾರಾಂತ್ಯದಲ್ಲೇ ಹೆಚ್ಚು ಪ್ರದರ್ಶನವಾಗುವುದು, ಚಿತ್ರಮಂದಿರಗಳಿಗೆ ಜನರು ಬರುವುದು. ಹೀಗಿರುವಾಗ ಈ ರೀತಿ ಸರ್ಕಾರ ಕರ್ಫ್ಯೂ ಹೇರಿದರೆ ಹೇಗೆ.? ಈಗಾಗಲೇ ಮೈಸೂರಿನ ಎಷ್ಟೋ ಚಿತ್ರಮಂದಿರಗಳು ನಡೆಸಲು ಆಗದೆ ಚಿತ್ರಮಂದಿರಗಳನ್ನು ಮುಚ್ಚಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ಯೋಚಿಸಬೇಕು. ವಾರಾಂತ್ಯದ ಕರ್ಫ್ಯೂ ತೆಗೆದು ನಮ್ಮ ಜೀವನಕ್ಕೆ ಅನುವು ಮಾಡಿಕೊಡಬೇಕು, ಅಲ್ಲಿಯವರೆಗೂ ನಾವು ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸುವುದಿಲ್ಲ.! ಸದ್ಯಕ್ಕೆ ಸ್ಥಗಿತವಾಗಿರುತ್ತದೆ ನಮ್ಮ ಮೈಸೂರಿನ ಚಿತ್ರಮಂದಿರಗಳು ಎಂದು ರಾಜರಾಂ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.