ನವದೆಹಲಿ, ಏ. 19: ದೇಶದಲ್ಲಿ ಕೊವಿಡ್-19 ಸೋಂಕಿನ ಪ್ರಮಾಣ ಮಿತಿಮೀರುತ್ತಿದ್ದರೂ, ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡುವ ಯೋಜನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್ಡೌನ್ ಮಾಡುವುದಿಲ್ಲ. ಅದರ ಬದಲು ಸೋಂಕು ಹೆಚ್ಚಿರುವ ಪ್ರದೇಶವನ್ನು ಗುರುತಿಸಿ ಕಂಟೈನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗುವುದು. ಅಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ಮತ್ತೆ ಹೆಚ್ಚುತ್ತಿರುವ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (FISME) ಅಧ್ಯಕ್ಷ ಅನಿಮೇಶ್ ಸಕ್ಸೇನಾರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಾದ್ಯಂತ ಮತ್ತೆ ಲಾಕ್ಡೌನ್ ಜಾರಿ ಮಾಡುವ ಯೋಜನೆ ಇಲ್ಲ ಎಂದು ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದ್ದಾರೆ. ಇನ್ನು ತಮ್ಮೊಂದಿಗೆ ಹಣಕಾಸು ಸಚಿವರು ಮಾತನಾಡಿದ್ದರ ಬಗ್ಗೆ ಅನಿಮೇಶ್ ಸಕ್ಸೇನಾ ಮಾಹಿತಿ ನೀಡಿದ್ದು, ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವ ಕೊರೊನಾ ವೈರಸ್ನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ರಾಜ್ಯಗಳಲ್ಲಿ ಇರುವ ವೈದ್ಯಕೀಯ ವ್ಯವಸ್ಥೆ, ಆಕ್ಸಿಜನ್ ಸೇರಿ ಇತರ ಸೌಕರ್ಯಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾಗಿ ಅನಿಮೇಶ್ ಸಕ್ಸೇನಾ ಹೇಳಿದ್ದಾರೆ. ಅಲ್ಲದೆ, ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಭರವಸೆಯನ್ನೂ ನೀಡಿದ್ದಾಗಿ ಉನ್ನತ ಮೂಲಗಳು ತಿಳಿಸಿವೆ.