ದೆಹಲಿ ಆ 30 : ಹರಿಯಾಣದ ಮುಖ್ಯಮಂತ್ರಿ ಕರ್ನಾಲ್ ಭೇಟಿ ವಿರೋಧಿಸಿ ರೈತರು ಪ್ರತಿಭಟನೆ ಮಾಡಿದ್ದು, ಈ ಸಂಧರ್ಭದಲ್ಲಿ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಈ ಲಾಠಿ ಪ್ರಹಾರವನ್ನು ಖಂಡಿಸಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ದೇಶವನ್ನು ಸರ್ಕಾರಿ ತಾಲಿಬಾನ್ಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್ ಕೇಂದ್ರ ಮತ್ತು ಹರಿಯಾಣ ಸರ್ಕಾರಗಳು ತಾಲಿಬಾನ್ ನೀತಿಯನ್ನು ಅನುಸರಿಸುತ್ತಿದ್ದಾವೆ ಎಂದ ಅವರು ದೇಶದಲ್ಲಿ ಸರ್ಕಾರಿ ತಾಲಿಬಾನ್ ಕಮಾಂಡರ್ಗಳು ಇದ್ದಾರೆ. ಆ ಕಮಾಂಡರ್ಗಳನ್ನು ಮೊದಲು ಗುರುತಿಸಬೇಕು. ಪ್ರತಿಭಟನಾಕಾರರ ತಲೆ ಒಡೆಯಿರಿ ಎಂದು ಹೇಳುವವರೂ ಕೂಡ ಅದೇ ಸರ್ಕಾರಿ ತಾಲಿಬಾನ್ನ ಕಮಾಂಡರ್ಗಳೇ ಆಗಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ಪ್ರತಿಭಟನಕಾರರ ತಲೆ ಒಡೆಯಿರಿ ಎಂದು ಅವರು ಹೇಳಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೆ ರಾಕೇಶ್ ಟಿಕಾಯತ್ ಪೊಲೀಸರನ್ನು ಮತ್ತು ಬಿಜೆಪಿ ನಾಯಕರನ್ನು ತಾಲಿಬಾನಿಗಳಿಗೆ ಹೋಲಿಸಿದ್ದಾರೆ.