- ಇನ್ನೂ ಬಗೆ ಹರಿಯದ ತಿರುಪತಿ (Tirumala Laddu controversy) ಲಡ್ಡು ವಿವಾದ
- ಬಾತ್ರೂಮ್ ಸ್ವಚ್ಛಗೊಳಿಸುವ ರಾಸಾಯನಿಕ ಬಳಕೆ ಮಾಡಲಾಗಿತ್ತು ಎಂದು ಕಿಡಿ ಕಾರಿದ ಸಿಎಂ ಚಂದ್ರಬಾಬು ನಾಯ್ಡು
- ನಾಯ್ಡು ಆರೋಪಗಳಿಗೆ ಜಗನ್ ಮತ್ತು ವೈಎಸ್ಆರ್ಸಿಪಿ ನಾಯಕರು ತಿರುಗೇಟು
ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧವಾದ ತಿರುಮಲ ತಿರುಪತಿ ದೇವಾಲಯದ (Tirumala Laddu controversy) ಪ್ರಸಾದವಾದ ತಿರುಪತಿ ಲಡ್ಡು ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.
ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗಂಭೀರ ಮಟ್ಟದ ಕಲಬೆರಕೆ ನಡೆದಿದೆ ಎಂಬ ಆರೋಪಗಳು ಆಂಧ್ರ ಪ್ರದೇಶದ ರಾಜಕೀಯ ವಲಯದಲ್ಲಿ ಭೂಕಂಪ ಸೃಷ್ಟಿಸಿವೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N. Chandrababu Naidu) ಅವರು, ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ಬಾತ್ರೂಮ್ ಹಾಗೂ ಶೌಚಗೃಹ ಸ್ವಚ್ಛತೆಗೆ ಬಳಸುವ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಈ ಹೇಳಿಕೆ ರಾಜ್ಯದಾದ್ಯಂತ ತೀವ್ರ (Tirumala Laddu controversy) ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಯಮ್ಮಿಗನೂರು ವಿಧಾನಸಭಾ ಕ್ಷೇತ್ರದಲ್ಲಿ ಪಾಸ್ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪವಿತ್ರ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯತೆಗೆ ಧಕ್ಕೆ ತಂದಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಹೇಳಿದ್ದಾರೆ.
ಸುಮಾರು ಐದು ವರ್ಷಗಳ ಕಾಲ ಈ ರೀತಿಯ ಮೋಸ ಮುಂದುವರಿದಿದ್ದು, ದೇವರ ಪ್ರಸಾದದಲ್ಲೇ ಕಲಬೆರಕೆ ಮಾಡಿರುವುದು ಮಹಾಪಾಪಕ್ಕೆ ಸಮಾನ ಎಂದು ಅವರು ಕಿಡಿಕಾರಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲಡ್ಡು ತಯಾರಿಕೆಗೆ ಬಳಸಲಾಗುತ್ತಿದ್ದ ತುಪ್ಪದಲ್ಲಿ ವಿವಿಧ ರೀತಿಯ ರಾಸಾಯನಿಕ ಅಂಶಗಳು ಸೇರಿದ್ದವು ಎಂಬುದಾಗಿ ನಾಯ್ಡು ಆರೋಪಿಸಿದ್ದಾರೆ.
ತರಕಾರಿ ಆಧಾರಿತ ಶುದ್ಧ ತುಪ್ಪ ದುಬಾರಿಯಾಗಿರುವುದರಿಂದ, ಅಗ್ಗದ ಪ್ರಾಣಿಗಳ ಕೊಬ್ಬನ್ನು ಬಳಸಿರಬಹುದೆಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) ವರದಿಯನ್ನು ಉಲ್ಲೇಖಿಸಿದ ಅವರು, ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶಗಳಿದ್ದವು ಎಂಬುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಇದೇ ರೀತಿಯ ಕಲಬೆರಕೆ ತುಪ್ಪವನ್ನು ಶ್ರೀಶೈಲಂ ದೇವಸ್ಥಾನಕ್ಕೂ ಸರಬರಾಜು ಮಾಡಲಾಗಿತ್ತು ಎಂಬ ಆರೋಪವೂ ಈ ವೇಳೆ ಕೇಳಿಬಂದಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ವೈಎಸ್ಆರ್ಸಿಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತಿರುಪತಿ ಲಡ್ಡು ವಿಷಯದಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ತಪ್ಪು ದಾರಿಗೆಳೆದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ತಿರುಮಲ ಲಡ್ಡು ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸುವುದಾಗಿ ಹೇಳಿದ ಅವರು, ಸತ್ಯವನ್ನು ಶೀಘ್ರದಲ್ಲೇ ಜನರ ಮುಂದೆ ಇಡಲಾಗುತ್ತದೆ ಎಂದು ಶಪಥ ಮಾಡಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿ ವೈಎಸ್ಆರ್ಸಿಪಿ ನಾಯಕಿ ಹಾಗೂ ಮಾಜಿ ಸಚಿವೆ ರೋಜಾ ಕೂಡ ಪ್ರತಿಕ್ರಿಯಿಸಿದ್ದು, ಜಗನ್ ಮೋಹನ್ ರೆಡ್ಡಿಯನ್ನು ಗುರಿಯಾಗಿಸಿ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಎಷ್ಟೇ ಆರೋಪಗಳು ಬಂದರೂ ಜಗನ್ ಅವರಿಗೆ ಏನೂ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ತಿರುಪತಿ ಲಡ್ಡು ಕಲಬೆರಕೆ ಆರೋಪಗಳು ಆಂಧ್ರ ಪ್ರದೇಶದಲ್ಲಿ ಭಾರಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದನ್ನು ಓದಿ : https://vijayatimes.com/ola-uber-rapido-strike/