ಬೆಂಗಳೂರು,ಜೂ.17: ಮಹಾಮಾರಿ ಕೊರೊನಾದಿಂದ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಮೃಗಾಲಯಗಳಿಗೆ ಇದೀಗ ಭರಪೂರ ಆರ್ಥಿಕ ನೆರವು ದೊರೆಯುತ್ತಿದೆ. ಸಾರ್ವಜನಿಕರ ಜೊತೆಗೆ ಸಿನಿಮಾ ಸ್ಟಾರ್ ಗಳು ಸಹ ಪ್ರಾಣಿಗಳ ದತ್ತು ಪಡೆಯುವ ಮೂಲಕ ವನ್ಯಜೀವಿಗಳ ನಿರ್ವಹಣೆಗೆ ಕೈಜೋಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊರೊನಾ ಸಂಕಷ್ಟದಿಂದಾಗಿ ಮೃಗಾಲಯದ ಪ್ರಾಣಿಗಳಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ವೀಡಿಯೋ ಮೂಲಕ ಮನವಿ ಮಾಡಿದ್ದರಲ್ಲದೆ, ಪ್ರಾಣಿಗಳ ನಿರ್ವಹಣೆಗೆ ಕೈಜೋಡಿಸುವಂತೆ ಮನವಿ ಮಾಡಿದ್ದರು. ಡಿಬಾಸ್ ಅವರ ಈ ವೀಡಿಯೋ ಹೊರ ಬರುತ್ತಿದ್ದಂತೆ ಎಚ್ಚೆತ್ತ ಪ್ರಾಣಿ ಪ್ರಿಯರು ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಲು ಆರಂಭಿಸಿದ್ದಾರೆ. ಪರಿಣಾಮ ರಾಜ್ಯದ ಒಂಭತ್ತು ಮೃಗಾಲಯಗಳಿಗೆ ಈಗಾಗಲೇ ಕೋಟ್ಯಾಂತರ ರೂ. ದೇಣಿಗೆ ಸಂಗ್ರಹವಾಗಿದೆ.
ಇನ್ನೂ ನಟ ದರ್ಶನ್ ಅವರ ಮನವಿಗೆ ಸ್ಯಾಂಡಲ್ವುಡ್ ಸ್ಟಾರ್ ಗಳು ಸಹ ಕೈಜೋಡಿಸಿದ್ದಾರೆ. ಈಗಾಗಲೇ ನಟ ರಿಯಲ್ ಸ್ಟಾರ್ ಉಪೇಂದ್ರ, ಆಫ್ರಿಕನ್ ಆನೆಯನ್ನ ದತ್ತು ಪಡೆದರೆ. ನಟಿ ಅಮೂಲ್ಯ ಜಗದೀಶ್, ಒಂದು ವರ್ಷ ಅವಧಿಗೆ ಜಾಗ್ವರ್ ದತ್ತು ಪಡೆದಿದ್ದಾರೆ. ನಟಿ ಕಾರುಣ್ಯ ರಾಮ್, ಇಂಡಿಯನ್ ಲೆಪರ್ಡ್ ದತ್ತು ಪಡೆಯುವ ಮೂಲಕ ಡಿಬಾಸ್ ಕರೆಗೆ ಸಾಥ್ ನೀಡಿದ್ದರೆ. ಯುವ ನಟ ಅಭಯ್ ವೀರ್ ಕೂಡ ಲೆಪರ್ಡ್ ದತ್ತು ಪಡೆದಿದ್ದಾರೆ.