ಹೊಸದಿಲ್ಲಿ, ಫೆ. 23: ರೈತರ ಪ್ರತಿಭಟನೆಗೆ ಸಂಬಂಧಿಸಿದ ಸೋಷಿಯಲ್ ಮೀಡಿಯಾದಲ್ಲಿ “ಟೂಲ್ ಕಿಟ್” ಹಂಚಿಕೊಳ್ಳುವಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದಿಶಾ ರವಿ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ಬಳಿಕ ತೀರ್ಪು ಕಾಯ್ದಿರಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಂಗಳವಾರ ಜಾಮೀನು ಮಂಜೂರು ಮಾಡಿದರು. ಇದರಿಂದ ಬಂಧಿತರಾಗಿ ಒಂಬತ್ತು ದಿನಗಳ ಬಳಿಕ ದಿಶಾ ರವಿಗೆ ಕೊಂಚ ನಿರಾಳತೆ ದೊರಕಿದಂತಾಗಿದೆ.
ಒಂದು ಲಕ್ಷ ಮೊತ್ತದ ಎರಡು ಬಾಂಡ್ ಗಳ ಭದ್ರತೆಯನ್ನು ನೀಡಿ ಜಾಮೀನು ಪಡೆಯಲು ಸೂಚಿಸಿದ ನ್ಯಾಯಾಲಯ.
ಇತ್ತ ದಿಶಾ ರವಿ ಅವರ ಪೊಲೀಸ್ ವಶದ ಒಂದು ದಿನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸುವಂತೆ ದೆಹಲಿ ಪೊಲೀಸರು ಕೇಳಿದ್ದರು. ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕೋರಿಕೆ ಅರ್ಜಿ ವಜಾಗೊಂಡಿದೆ.
ದಿಶಾ ರವಿ ಪರ ಹಾಜರಿದ್ದ ವಕೀಲ ಸಿದ್ಧಾರ್ಥ್ ಅಗರವಾಲ್, ಖಲಿಸ್ತಾನ ಚಳವಳಿಗೂ ದಿಶಾಗೂ ಸಂಬಂಧವಿಲ್ಲ. ಅವರ ಉದ್ದೇಶ ಪರಿಸರ ರಕ್ಷಣೆ ಮತ್ತು ಕೃಷಿಗೆ ಮಾತ್ರವೇ ಸೀಮಿತವಾಗಿದೆ. ಇನ್ನಿಬ್ಬರು ಆರೋಪಿಗಳಾದ ನಿಕಿತಾ ಜಾಕೋಬ್ ಹಾಗೂ ಶಂತನು ಮುಲುಕ್ ಅವರಿಗೆ ಕಾಲಾವಕಾಶ ನೀಡಲು ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ದಿಶಾ ರವಿಗೂ ಜಾಮೀನು ನೀಡುವಂತೆ ಕೋರಿದರು. ದಿಶಾ ರವಿಯನ್ನು ದೆಹಲಿ ಪೊಲೀಸರ ಸೈಬರ್ ಸೆಲ್ ತಂಡವು ಬೆಂಗಳೂರಿನಿಂದ ಬಂಧಿಸಿ ದೆಹಲಿಗೆ ಕರೆತಂದಿತು.