ತುಮಕೂರು : ಜಿಲ್ಲೆಯಲ್ಲಿ ಶೀಘ್ರದಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಗೊಳ್ಳಲಿದ್ದು ಈ ಮೂಲಕ ಹಲವು ವರ್ಷಗಳ ತುಮಕೂರು ಜನತೆಯ ಕನಸು ಸಹಕಾರಗೊಳ್ಳಲಿದೆ.
ನಾಳೆ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾಸ್ಪತ್ರೆ ಆವರಣದಲ್ಲಿ ‘ಪೆರಿಫಿರಲ್ ಕ್ಯಾನ್ಸರ್ ಕೇಂದ್ರ’, ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ ಮತ್ತು ‘ಪೌಷ್ಟಿಕ ಪುನಶ್ಚೇತನ ಕೇಂದ್ರ’ಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಗರದ ಹೃದಯಭಾಗದಲ್ಲಿರುವ ಜಿಲ್ಲಾಸ್ಪತ್ರೆಯನ್ನು 1948ರಿಂದ ಹಂತ ಹಂತವಾಗಿ ನಿರ್ಮಿಸಲಾಗಿದ್ದು, ಪ್ರಸ್ತುತ 400 ಹಾಸಿಗೆಗಳನ್ನು ಒಳಗೊಂಡಿದೆ. 75 ವರ್ಷ ತುಂಬಿರುವ ಈ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ 210 ಹಾಸಿಗೆಗಳುಳ್ಳ ಮೂರು ಹೊಸ ಕೇಂದ್ರಗಳು ಸೇರ್ಪಡೆಗೊಳ್ಳಲಿವೆ.
ಪೆರಿಫರಲ್ ಕ್ಯಾನ್ಸರ್ ಕೇಂದ್ರ:
ಸುಮಾರು 27,84,099 ಜನಸಂಖ್ಯೆ ಹೊಂದಿರುವ ತುಮಕೂರು ಜಿಲ್ಲೆಯು ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಸಾಧಿಸುವ ಕೇಂದ್ರವಾಗಿದ್ದು, 5 ಜಿಲ್ಲೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಈ ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಸೇವೆಗಳಿದ್ದರೂ ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಇದರಿಂದ ತುಮಕೂರು ಹಾಗೂ ನೆರೆ ಜಿಲ್ಲೆಗಳ ಸಾವಿರಾರು ವಿವಿಧ ಬಗೆಯ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯ್ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕಿದ್ವಾಯ್ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುವುದರ ಜೊತೆಗೆ ಬಹಳಷ್ಟು ರೋಗಿಗಳು ರೋಗ ನಿರ್ಧರಿಸುವ ಮುನ್ನವೇ ಸಾವಿನ ಮನೆ ಸೇರುತ್ತಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸರ್ಕಾರವು ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸಾಮರ್ಥ್ಯವುಳ್ಳ ಪೆರಿಫರಲ್ ಕ್ಯಾನ್ಸರ್ ಕೇಂದ್ರವನ್ನು 9906.21 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಯವ್ಯಯ ಘೋಷಿಸಿದೆ. ಈ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರನ್ನು ಗುರುತಿಸಿ, ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಮೂಲಕ ತುಮಕೂರು ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.