ಲಕ್ನೊ, ಜ. 06: ದೇವಸ್ಥಾನಕ್ಕೆ ಹೋಗಿದ್ದ 50ರ ವಯಸ್ಸಿನ ಮಹಿಳೆಯನ್ನು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಭೀಕರವಾಗಿ ಹತ್ಯೆಗೈದಿದ್ದಾರೆ.
ಬದೌನ್ ಜಿಲ್ಲೆಯ ಉಘೈಟಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ರವಿವಾರ ಸಂಜೆ ದೇವಸ್ಥಾನಕ್ಕೆ ಪೂಜೆಗೆಂದು ಹೋದವರು ಮತ್ತೆ ವಾಪಸಾಗಲಿಲ್ಲ ಎಂದು ಮಗ ಚಿಂತಿತನಾಗಿದ್ದ. ಆದರೆ ಆ ದಿನ ರಾತ್ರಿ 12 ಗಂಟೆ ಸುಮಾರಿಗೆ ದುಷ್ಕರ್ಮಿಗಳಾದ ಮಹಂತಾ ಬಾಬಾ ಸತ್ಯನಾರಾಯಣ, ಆತನ ಸಹಚರರಾದ ವೆದ್ರಮ್ ಹಾಗೂ ಚಾಲಕ ಜಸ್ಪಾಲ್ ರಕ್ತದ ಮಡುವಿನಲ್ಲಿದ್ದ ಮಹಿಳೆಯನ್ನು ತಮ್ಮದೇ ವಾಹನದಲ್ಲಿ ಕರೆ ತಂದು ಮಹಿಳೆಯ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿ ಅರ್ಚಕ ಸೇರಿ ಮೂವರ ವಿರುದ್ದ ಎಫ್ ಐಆರ್ ದಾಖಲಿಸಲಾಗಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
“ತಾಯಿ ಪ್ರತಿದಿನ ಪೂಜೆಗಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ರವಿವಾರ ಸಂಜೆ 5ಕ್ಕೆ ದೇವಾಲಯಕ್ಕೆ ಹೋದ ತಾಯಿಯನ್ನು ರಾತ್ರಿ 12ರ ಸುಮಾರಿಗೆ ಮೂವರು ದುಷ್ಕರ್ಮಿಗಳು ತಾಯಿಯನ್ನು ಒಂದು ವಾಹನದಲ್ಲಿ ತಂದುಬಿಟ್ಟಿದ್ದಾರೆ” ಎಂದು ಮೃತ ಮಹಿಳೆಯ ಪುತ್ರ ಮಾದ್ಯಮಗಳಿಗೆ ತಿಳಿಸಿದ್ದಾರೆ.
ನಾವು ದೂರು ನೀಡಿದರೂ ಉಘೈಟಿ ಪೊಲೀಸ್ ಠಾಣೆಯ ಅಧಿಕಾರಿ ರವೀಂದ್ರ ಪ್ರತಾಪ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಘಟನೆ ನಡೆದು 18 ಗಂಟೆಗಳ ಬಳಿಕ ಸೋಮವಾರ ಮಧ್ಯಾಹ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಮೂವರು ವೈದ್ಯರ ತಂಡ ಪೋಸ್ಟ್ ಮಾರ್ಟಂ ಮಾಡಿದೆ.
ಪೋಸ್ಟ್ ಮಾರ್ಟಂ ವರದಿಯ ಪ್ರಕಾರ, ಮಹಿಳೆಯ ಖಾಸಗಿ ಭಾಗಕ್ಕೆ ರಾಡ್ ತುರುಕಿಸಲಾಗಿದ್ದು, ತೀವ್ರ ಗಾಯವಾಗಿದೆ. ದುಷ್ಕರ್ಮಿಗಳ ನಡೆಸಿರುವ ಹಲ್ಲೆಗೆ ಮಹಿಳೆಯ ಶ್ವಾಸಕೋಶಕ್ಕೆ ಹಾನಿಯಾಗಿದ್ದು,ಮಹಿಳೆಯ ಪಕ್ಕೆಲುಬು ಹಾಗೂ ಕಾಲು ಮುರಿಯಲಾಗಿದೆ. ಆಕೆಗೆ ತೀವ್ರ ರಕ್ತಸ್ರಾವವೂ ಆಗಿದೆ ಎಂದು ವರದಿಯಾಗಿದೆ. ಪೊಲೀಸರು ಹತ್ಯೆ ಹಾಗೂ ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಇಬ್ಬರು ದುಷ್ಕರ್ಮಿಗಳನ್ನುಸೆರೆ ಹಿಡಿಯಲು 4 ತಂಡಗಳನ್ನು ರಚಿಸಿದ್ದಾರೆ.