ಬೆಂಗಳೂರು, ಮಾ. 02: ದೇಶದ ಪ್ರಧಾನಿಯೇ ಏಮ್ಸ್ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿರುವಾಗ, ಕೃಷಿ ಸಚಿವ ಬಿ. ಸಿ ಪಾಟೀಲ್ ಸಚಿವರು ಆಸ್ಪತ್ರೆಗೆ ತೆರಳದೇ ಆರೋಗ್ಯ ಸಿಬ್ಬಂದಿಯಿಂದ ಹೋಮ್ ಸರ್ವೀಸ್ ಪಡೆದಿದ್ದಾರೆಂದು ಟೀಕೆ ವ್ಯಕ್ತವಾಗಿದೆ. ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿದ್ದು, ಸಧ್ಯ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಸಿಎಂ ಯಡಿಯೂರಪ್ಪನವ್ರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವ್ರು ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ ಎಂದರು.
ಪೂರ್ಣ ಪ್ರಜ್ಞ ಲೇಔಟ್ʼನ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿ.ಎಸ್ ಯಡಿಯೂರಪ್ಪ ‘ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳೋದು ಮುಖ್ಯ. ಹೀಗಾಗಿ ಯಾರ್ಯಾರಿಗೆ ಎಲ್ಲಿಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ. ನಾನು ಮನೇಲಿ ಲಸಿಕೆ ಹಾಕಿಸಿಕೊಳ್ಳಬೇಕಾ? ಅಥವಾ ಆಸ್ಪತ್ರೆಗೆ ಹೋಗಿ ಹಾಕಿಸಿಕೊಳ್ಬೇಕಾ ಎಂದು ನೋಡುತ್ತೇನೆ. ಇನ್ನೆರಡು ದಿನಗಳಲ್ಲಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ’ ಎಂದಿದ್ದಾರೆ. ಈ ಹೇಳಿಕೆ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.