ಶಾಲೆಗಳಲ್ಲಿ ಸಮವಸ್ತ್ರ(Uniform) ಧರಿಸುವುದು ಎಂದರೆ ಜೈಲು ಅಲ್ಲ. ಸಮವಸ್ತ್ರ ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟದ್ದು. ಶಿಕ್ಷಣ(Education) ಮುಖ್ಯವೇ ಹೊರತು ಸಮವಸ್ತ್ರವಲ್ಲ. ಇಂತಹ ಕ್ಷುಲ್ಲಕ ವಿಷಯ ಇಂದು ರಾಜ್ಯ(State), ದೇಶ(Country) ಮತ್ತು ಅಂತರಾಷ್ಟ್ರೀಯ(International) ಮಟ್ಟಕ್ಕೂ ಹಬ್ಬಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಅಲ್ಲ, ಲಿಂಗಾಯತ ಎಂದು ಈಗಾಗಲೇ ಹೇಳಿದ್ದೇನೆ. ನಾನು ಬಸವಣ್ಣನ ಅನುಯಾಯಿ. ಸಮಾನತೆ ನನ್ನ ಮುಖ್ಯ ಆಶಯ. ಜಾತಿಗಳನ್ನು ಮೀರಿದ ಚೌಕಟ್ಟಿನ ಧರ್ಮವದು. ಆ ಪಥದಲ್ಲಿ ನಡೆಯುವನು, ಹಾಗೇ ನಡೆಯುತ್ತಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎಂಬ ಪದ ತನ್ನ ಸೌಮ್ಯತೆಯನ್ನು ಕಳೆದುಕೊಳ್ಳುತ್ತಿದೆ. ವಿಶ್ವಹಿಂದೂ ಪರಿಷತ್, ಪ್ರಮೋದ್ ಮುತಾಲಿಕ್ ಅಂತವರಿಂದ ‘ಹಿಂದೂ’ ಪದವು ಕಲುಷಿತಗೊಂಡಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ಚುನಾವಣೆ ಹತ್ತಿರ ಬರುತ್ತಿದೆ ಹೀಗಾಗಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ ಅನಗತ್ಯವಾಗಿ ಹಿಜಾಬ್ ವಿವಾದವನ್ನು ಹುಟ್ಟು ಹಾಕಲಾಯಿತು. ಹಿಜಾಬ್ ವಿವಾದ ಪ್ರಾರಂಭವಾದ ಉಡುಪಿಯ ಕಾಲೇಜಿನಲ್ಲಿ ಜನವರಿ 1 ರಂದು ಹೋಗಿ ಭಾಷಣ ಮಾಡಿ ಬಂದಿದ್ದೆ. ಅದಾಗಿ ಕೇವಲ ಎಂಟು ದಿನಗಳಲ್ಲಿ ಈ ವಿವಾದ ತಾರಕಕ್ಕೇರಿದೆ. ಹಾಗಾದರೆ ಈ ವಿವಾದವನ್ನು ಸೃಷ್ಟಿಸಿದವರು ಯಾರು? ಎಂದು ಪ್ರಶ್ನಿಸಿದರು.

ಇನ್ನು ನಾನು ಸದಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ಬಂದಿದ್ದೇನೆ. ನಾನು ಬದುಕಿನಲ್ಲಿ ಹೋರಾಟಗಾರ, ಹೀಗಾಗಿಯೇ ನನ್ನ ಬರಹ ಮತ್ತು ಮಾತಿನ ಮೂಲಕ ಸಮಾಜದ ತಲ್ಲಣಗಳಿಗೆ ಪ್ರತಿಕ್ರಿಯಿಸುತ್ತಾ ಬಂದಿದ್ದೇನೆ. ಹೀಗಾಗಿ ನನ್ನ ಬದುಕಿನಲ್ಲಿ ಜೀವಂತಿಕೆ ಇದೆ. ಖುಷಿಯಾಗಿದ್ದೇನೆ ಎಂದರು.