ನವದೆಹಲಿ, ಡಿ. 16: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಿತರ ಗಣ್ಯರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಿದರು.1971ರ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದ 50ನೇ ವರ್ಷದ ಸ್ಮರಣಾರ್ಥ ರಾಷ್ಟ್ರೀಯ ವಾರ್ ಮೆಮೋರಿಯಲ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತಿತರರು ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ವಿಜಯ ಜ್ಯೋತಿ ಬೆಳಗಿಸಿದರು.
ರಕ್ಷಣಾ ಸಚಿವ ರಾಜನಾಥ್ಸಿಂಗ್, ಮೂರು ಸೇನಾ ಪಡೆಗಳ ಮುಖ್ಯಸ್ಥರುಗಳು ದೇಶಕ್ಕಾಗಿ ಪ್ರಾಣರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ವಿಜಯ್ ದಿವಸ್ ಅಂಗವಾಗಿ ದೇಶದ ನಾನಾ ಭಾಗಗಳಿಂದ ವಿಜಯ ಜ್ಯೋತಿ ಯಾತ್ರೆ ನಡೆಸಲಾಯಿತು.
ಪರಮ ವೀರಚಕ್ರ, ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹುಟ್ಟೂರುಗಳಿಗೆ ತೆರಳಿ ಅಲ್ಲಿನ ಪವಿತ್ರ ಮಣ್ಣನ್ನು ಸಂಗ್ರಹಿಸಿ ದೇಶದ ವಿವಿಧ ಪ್ರದೇಶಗಳಿಗೆ ತೆರಳಿದ ಯಾತ್ರೆ ಇಂದು ವಾರ್ ಮೆಮೋರಿಯಲ್ಗೆ ಆಗಮಿಸಿತು ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.
1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಗೆಲುವು ದೊರೆತ ಡಿ.16ನೇ ದಿನಾಂಕದಂದು ಪ್ರತಿವರ್ಷ ವಿಜಯ್ ದಿವಸ್ ಆಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಬಾಂಗ್ಲಾದೇಶವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ವಿಜಯ್ ದಿವಸ್ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.
ವಿಜಯ್ದಿವಸ್ ಸ್ಮರಣಾರ್ಥ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ದೇಶದ ಹಲವಾರು ಮಹನೀಯರು ಶುಭಾಶಯ ಕೋರಿದ್ದಾರೆ.