ಇದು ವಿಜಯಟೈಮ್ಸ್ ವರದಿಯಿಂದಾದ ಬಿಗ್ ಇಂಪ್ಯಾಕ್ಟ್. ರೈತರ ಸೊಂಟ ಮುರೀತಿದ್ದ, ನಿತ್ಯ ಕಣ್ಣೀರಿಗೆ ಕಾರಣವಾಗಿದ್ದ ಈ ರಸ್ತೆ ರಿಪೇರಿಯಾಗಿದೆ. ಕೊಚ್ಚೆಯ ಕೊಂಪೆಯಾಗಿದ್ದ ರಸ್ತೆ ಈಗ ಪಕ್ಕಾ ಸೀಮೆಂಟ್ ರಸ್ತೆಯಾಗಿ ಕಿಲ್ಲನ ಕೇರಿ ರೈತರ ಮೊಗದಲ್ಲಿ ನಗು ಮೂಡಿದೆ.
ಈ ಹಿಂದೆ ಈ ರಸ್ತೆಯಲ್ಲಿ ಓಡಾಡಲು ಜನ ಭಯ ಬೀಳುತ್ತಿದ್ದರು. ಎತ್ತಿನ ಗಾಡಿಗಳಂತು ಇಲ್ಲಿ ಹೋಗೋದ್ರೆ ಎತ್ತುಗಳ ಕಾಲೇ ಮುರಿಯುತ್ತಿತ್ತು. ಇಷ್ಟೊಂದು ದುಸ್ಥಿತಿಯಲ್ಲಿದ್ದ ಕಿಲ್ಲನಕೇರಿಯ ಈ ರಸ್ತೆಯ ಬಗ್ಗೆ ವಿಜಯಟೈಮ್ಸ್ ವರದಿ ಮಾಡಿತ್ತು.
ಅಂದು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ಓಡಾಡಲು ಕಷ್ಟಪಡುತ್ತಿದ್ದ ರೈತರು ಈಗ ಖುಷಿ ಖುಷಿಯಾಗಿ ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಎತ್ತಿನಗಾಡಿಗಳನ್ನು ಯಾವುದೇ ಭಯ ಆತಂಕ ಇಲ್ಲದೆ ನಿರಾಳವಾಗಿ ಓಡಿಸುತ್ತಿದ್ದಾರೆ.
ಮೂಲ ಸೌಲಭ್ಯಗಳಿಲ್ಲದೇ ಬಳಲುತ್ತಿದೆ ಯಾದಗಿರಿ ಎಂಬ ವರದಿಯಲ್ಲಿ ಈ ರಸ್ತೆಯ ಬಗ್ಗೆ ವರದಿ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆಯ ಪರಿಸ್ಥಿತಿಯನ್ನು ಶಾಸಕರಿಗೆ ಗಮನಕ್ಕೆ ತಂದ್ರು. ಶಾಸಕ ನಾಗನಗೌಡ ಕಂದಗೋಡ್ ಅವರು ಶಾಸಕರ ಅನುದಾನದಲ್ಲಿ 85 ಲಕ್ಷ ಬಿಡುಗಡೆ ಮಾಡಿ ಹೊಸ ರಸ್ತೆ ನಿರ್ಮಿಸಿ ಕಿಲ್ಲನಕೇರಿ ಮಂದಿಯ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ರು.
ಬಹುಕಾಲದಿಂದ ಜನರಿಗೆ ಶಾಪದಂತಿದ್ದ ಈ ರಸ್ತೆ ಈಗ ರೈತರಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. ಈ ಬದಲಾವಣೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಲ್ಲದೇ ವಿಜಯಟೈಮ್ಸ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಯಾದಗಿರಿಯಿಂದ ಶರಬು ಬಿ ನಾಟೇಕಾರ