ಬೆಂಗಳೂರಿನಲ್ಲಿ ವೈರಲ್ ಸೋಂಕಿನ ಅಬ್ಬರ: ಇನ್ಫ್ಲುಯೆನ್ಜಾ ಪ್ರಕರಣಗಳಲ್ಲಿ ಏರಿಕೆ
ಮಳೆಗಾಲ, ಶಾಲೆಗಳ ಆರಂಭದಿಂದ ಸೋಂಕು ವೇಗವಾಗಿ ಹರಡುವ ಆತಂಕ: ಹಿರಿಯರು ಮತ್ತು ಮಕ್ಕಳಿಗೆ ವೈದ್ಯರ ಎಚ್ಚರಿಕೆ.
ಶಾಲೆಗಳ ಪುನರಾರಂಭದಿಂದ ಮಕ್ಕಳ ಮೂಲಕ ಕುಟುಂಬಕ್ಕೂ ಸೋಂಕು ಹರಡುವ ಸಾಧ್ಯತೆ ಎಂದು ತಜ್ಞರ ಎಚ್ಚರಿಕೆ
Bengaluru: ನಗರದಲ್ಲಿ ಕಳೆದ ಕೆಲವು ವಾರಗಳಿಂದ ಉಸಿರಾಟಕ್ಕೆ (viral infections in Bengaluru) ಸಂಬಂಧಿಸಿದ ವೈರಲ್ (Viral) ಸೋಂಕುಗಳ ಪ್ರಕರಣಗಳು ಏರಿಕೆಯಾಗುತ್ತಿವೆ.
ವಿಶೇಷವಾಗಿ ಮಳೆಗಾಲದ ಹವಾಮಾನ ಬದಲಾವಣೆ, ಶಾಲೆಗಳು ಪುನರಾರಂಭವಾಗಿರುವುದು ಹಾಗೂ ಜನಸಂದಣಿ ಹೆಚ್ಚಾಗಿರುವುದು ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ಸೋಂಕುಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ, ಸದ್ಯ ಇನ್ಫ್ಲುಯೆನ್ಜಾ ವೈರಸ್ ಸೋಂಕುಗಳೇ ಹೆಚ್ಚು ದಾಖಲಾಗುತ್ತಿವೆ.
ಜ್ವರ, ಗಂಟಲು ನೋವು, ಕೆಮ್ಮು, ಮೂಗಿನಿಂದ ನೀರು ಹರಿಯುವುದು ಸೇರಿದಂತೆ ಸಾಮಾನ್ಯ (viral infections in Bengaluru) ಉಸಿರಾಟದ ತೊಂದರೆಗಳೊಂದಿಗೆ ಹೆಚ್ಚಿನ
ರೋಗಿಗಳು ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ. ವೈದ್ಯರ ಪ್ರಕಾರ, ಬಹುತೇಕರು ಸಾಮಾನ್ಯ ಚಿಕಿತ್ಸೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.
ವೈದ್ಯಕೀಯ ತಜ್ಞರ ಮಾಹಿತಿ ಪ್ರಕಾರ, ಇನ್ಫ್ಲುಯೆನ್ಜಾ ಎ (Influenza A) ವೈರಸ್ನಲ್ಲಿನ H3N2 ಹಾಗೂ ಸ್ವೈನ್ ಫ್ಲೂ ತಳಿಗಳ ಸೋಂಕುಗಳು ಈ ಸಮಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ.
ಇನ್ನೊಂದೆಡೆ, ಕೋವಿಡ್ನ JN.1 ರೂಪಾಂತರಿ ಕೂಡ ಕೆಲವು ಪ್ರಕರಣಗಳಲ್ಲಿ ಪತ್ತೆಯಾಗುತ್ತಿದ್ದರೂ, ಇದು ಒಮಿಕ್ರಾನ್ (Omicron) ಮಾದರಿಯಂತೆಯೇ ಹೆಚ್ಚಿನ ಸಂದರ್ಭಗಳಲ್ಲಿ ಸೌಮ್ಯ ಲಕ್ಷಣಗಳನ್ನು ಮಾತ್ರ ಉಂಟುಮಾಡುತ್ತಿದೆ.
ಪ್ರತಿದಿನ ಹಲವಾರು ಹೊಸ ಇನ್ಫ್ಲುಯೆನ್ಜಾ ಪ್ರಕರಣಗಳು ದಾಖಲಾಗುತ್ತಿದ್ದು, ರೋಗಿಗಳಲ್ಲಿ ಜ್ವರ, ತಲೆನೋವು, ಗಂಟಲು ಕೆರವು, ಕೆಮ್ಮು ಮತ್ತು ದೇಹ ನೋವು ಸಾಮಾನ್ಯವಾಗಿ
ಕಂಡುಬರುತ್ತಿದೆ. ಹೆಚ್ಚಿನವರಿಗೆ ಮನೆಯಲ್ಲೇ ವಿಶ್ರಾಂತಿ ಮತ್ತು ವೈದ್ಯರ ಸಲಹೆಯಂತೆ ಔಷಧಿ ಸೇವನೆಯಿಂದಲೇ ಗುಣಮುಖರಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಆದರೆ ಹಿರಿಯ ನಾಗರಿಕರು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ.
ಇಂತಹ ವರ್ಗದ ಕೆಲವರಿಗೆ ಸೋಂಕು ತೀವ್ರಗೊಂಡು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆಸ್ಪತ್ರೆ ಹಾಗೂ ಐಸಿಯು ಚಿಕಿತ್ಸೆಯ ಅಗತ್ಯವೂ
ಉಂಟಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಸದ್ಯ ತೀವ್ರ ಲಕ್ಷಣಗಳಿರುವವರಿಗೆ ಮಾತ್ರ ಕೋವಿಡ್ ಹಾಗೂ ಇನ್ಫ್ಲುಯೆನ್ಜಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇದರ ಪರಿಣಾಮವಾಗಿ ಸೌಮ್ಯ ಲಕ್ಷಣಗಳಿರುವ ಕೆಲವು ಕೋವಿಡ್ ಪ್ರಕರಣಗಳು ಪರೀಕ್ಷೆಗೆ ಒಳಪಡುವುದಿಲ್ಲ ಎಂಬ ಸಾಧ್ಯತೆಯನ್ನೂ ವೈದ್ಯರು ಉಲ್ಲೇಖಿಸಿದ್ದಾರೆ.
ತಜ್ಞರ ಅಭಿಪ್ರಾಯದಂತೆ, ಶಾಲೆಗಳು ಆರಂಭವಾದ ಬಳಿಕ ಮಕ್ಕಳಲ್ಲಿ ಸೋಂಕುಗಳು ವೇಗವಾಗಿ ಹರಡುತ್ತಿವೆ. ಶಾಲೆಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ನಂತರ ಮನೆಗೆ ತಲುಪಿ ಕುಟುಂಬ ಸದಸ್ಯರಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗುತ್ತದೆ.
ಮಳೆಗಾಲದಲ್ಲಿ ವಾತಾವರಣದಲ್ಲಿನ ತೇವಾಂಶ, ತಾಪಮಾನದಲ್ಲಿನ ಏರಿಳಿತ ಮತ್ತು ಮುಚ್ಚಿದ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವ ಪರಿಸ್ಥಿತಿ ವೈರಸ್ ಹರಡುವಿಕೆಗೆ ಅನುಕೂಲಕರವಾಗುತ್ತಿದೆ.
ಕೋವಿಡ್ ಈಗ ಸ್ಥಳೀಯವಾಗಿ ನಿರಂತರವಾಗಿ ಕಾಣಿಸಿಕೊಳ್ಳುವ ಸೋಂಕಿನ ಸ್ವರೂಪ ಪಡೆದಿದ್ದು, ಆತಂಕಕ್ಕಿಂತ ಮುನ್ನೆಚ್ಚರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು
ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.ಆರೋಗ್ಯ ತಜ್ಞರು ಸಾರ್ವಜನಿಕರಿಗೆ ಕೆಲವು ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಜ್ವರ, ಕೆಮ್ಮು ಅಥವಾ ಗಂಟಲು ನೋವು ಕಂಡುಬಂದರೆ ವಿಶ್ರಾಂತಿ ಪಡೆಯುವುದು, ವೈದ್ಯರ ಸಲಹೆ ಪಡೆಯುವುದು, ಅಗತ್ಯವಿದ್ದರೆ ಮಾಸ್ಕ್ ಧರಿಸುವುದು, ಕೈಗಳನ್ನು
ಆಗಾಗ ಸ್ವಚ್ಛವಾಗಿ ತೊಳೆಯುವುದು ಮತ್ತು ಜನಸಂದಣಿಯ ಸ್ಥಳಗಳಲ್ಲಿ ಎಚ್ಚರಿಕೆ ವಹಿಸುವುದು ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು.
ಮಕ್ಕಳು, ಹಿರಿಯರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರು ವಿಶೇಷ ಕಾಳಜಿ ವಹಿಸಬೇಕು. ಆರೋಗ್ಯದಲ್ಲಿ ಯಾವುದೇ ತೀವ್ರ ಬದಲಾವಣೆ
ಕಂಡುಬಂದರೆ ಸ್ವಯಂ ಔಷಧಿ ಸೇವನೆ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಸುರಕ್ಷಿತ ಕ್ರಮವಾಗಿದೆ.
ಈ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಮಳೆಗಾಲದಲ್ಲಿ ಹೆಚ್ಚುತ್ತಿರುವ ವೈರಲ್ ಸೋಂಕುಗಳಿಂದ ತಮ್ಮನ್ನು ಹಾಗೂ ಕುಟುಂಬವನ್ನು ರಕ್ಷಿಸಿಕೊಳ್ಳಬಹುದು.
