ಬೆಂಗಳೂರು, ಆ. 4: ಹಲವು ದಿನಗಳಿಂದ ಏಕಾಂಗಿಯಾಗಿ ಸರಕಾರ ನಡೆಸುತ್ತಿದ್ದ ಸಿಎಂ ಬೊಮ್ಮಾಯಿಯವರ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ. ದೆಹಲಿಯಿಂದ ವಾಪಸ್ಸಾದ ಬಳಿಕ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿದ ಸಿಎಂ, ಒಟ್ಟು 29 ಮಂದಿ ಇಂದು ಸಚಿವರಾಗಲಿದ್ದು, ಇದರಲ್ಲಿ 07 ಒಬಿಸಿ, 3ಎಸ್ಸಿ, 01ಎಸ್ಟಿ, 07 ಒಕ್ಕಲಿಗ, 08 ಲಿಂಗಾಯತ, 02 ಬ್ರಾಹ್ಮಣ ಒಬ್ಬ ರೆಡ್ಡಿ ಸಮುದಾಯ ಹಾಗೂ ಓರ್ವ ಮಹಿಳೆಯಿರಲಿದ್ದಾರೆಂದು ಹೇಳಿದರು. ಈ ಸಂಪುಟವನ್ನು ಜನಪರ ಆಡಳಿತ ಮತ್ತು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂದು ರಚಿಸಲಾಗಿದೆ. ಈ ಸಂಪುಟಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಡ್ಡಾ ರವರ ಅನುಮತಿ ಮತ್ತು ಮಾಜಿ ಸಿ ಎಂ ಬಿ ಎಸ್ ವೈ ರವರ ಆಶೀರ್ವಾದವಿದೆಯೆಂದು ಬೊಮ್ಮಾಯಿ ಹೇಳಿದರು.ಜೊತೆಗೆ ಈ ಬಾರಿ ಡಿಸಿಎಂ ಸ್ಥಾನವೇ ಇರುವುದಿಲ್ಲವೆಂದು ಹೇಳಿ ಉಪಮುಖ್ಯಮಂತ್ರಿ ರೇಸ್ ನಲ್ಲಿದ್ದ ಶಾಸಕರಿಗೆ ಶಾಕ್ ಕೊಟ್ಟರು.
ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ನೂತನ 29 ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಲಿದ್ದಾರೆ.