ಕೊಲ್ಕತ್ತಾ, ಮೇ. 24: ಇತ್ತೀಚೆಗಷ್ಟೇ ಪಶ್ಚಿಮ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿ ಅವಾಂತರ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇಂದು ಯಾಸ್ ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಇಂದು ಸಂಜೆ ವೇಳೆಗೆ ಪಶ್ಚಿಮ ಬಂಗಾಳದತ್ತ ಸಾಗಲಿರುವ ಯಾಸ್ ಚಂಡಮಾರುತ ಮೇ 26ರ ವೇಳೆಗೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ 950 NDRF ಸಿಬ್ಬಂದಿಯನ್ನು ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗೆ ಏರ್ ಲಿಫ್ಟ್ ಮಾಡಲಾಗಿದ್ದು, 26 ಹೆಲಿಕಾಪ್ಟರ್ಗಳನ್ನು ಯಾವುದೇ ಕ್ಷಣದಲ್ಲಿ ಜನರ ರಕ್ಷಣೆಗೆ ಆಗಮಿಸಲು ಮೀಸಲಿಡಲಾಗಿದೆ.
ಪಶ್ಚಿಮ ಬಂಗಾಳದ ಕರಾವಳಿ ತೀರದಿಂದ 670 ಕಿ.ಮೀ. ದೂರದಲ್ಲಿರುವ ಯಾಸ್ ಇಂದು ಸಂಜೆಯ ವೇಳೆಗೆ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದೆ ಎನ್ನಲಾಗಿದೆ. ಮೇ 26ರಂದು ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಲಿರುವ ಈ ಚಂಡಮಾರುತ ಗಂಟೆಗೆ 155 ಕಿ.ಮೀ.ಯಿಂದ 165 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಇದರಿಂದ ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.