ಬೆಂಗಳೂರು ಜು 26: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆತಂಕ ಇನ್ನೂ ಕಡಿಮೆಯಾಗಿಲ್ಲ. ರಾಜ್ಯದೆಲ್ಲೆಡೆ ನೂರಾರು ಮಂದಿ ಪ್ರತಿನಿತ್ಯ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇವೆಲ್ಲದರ ನಡುವೆಯೂ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಇಲ್ಲದೆ ಬೆಂಗಳೂರು ತುಂಬಾ ಸೈಕಲ್ ಸವಾರಿ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ತಾವು ಸೈಕಲ್ ಸವಾರಿ ಮಾಡಿದ ಫೋಟೋಗಳನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮಾಸ್ಕ್ ಧರಿಸದೆ ಸೈಕಲ್ ಸವಾರಿ ಮಾಡಿರುವ ಸಂಸದರ ನಡಗೆ ಆಕ್ಷೇಪ ವ್ಯಕ್ತಪಡಿಸಿರೋ ಜನಸಾಮಾನ್ಯರು, ಕೊರೊನಾ ನಡುವೆ ಜನಪ್ರತಿನಿಧಿಗಳು ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿ ಸಾಕಷ್ಟು ಜನರು ಕಮೆಂಟ್ ಸಹ ಮಾಡಿದ್ದಾರೆ.
ಇನ್ನೂ ಬಿಜೆಪಿ ಸಂಸದರ ಸೈಕಲ್ ಸವಾರಿಯ ಫೋಟೋ ಬಳಿಸಿ ಅನೇಕರು ಟ್ರೋಲ್ ಕೂಡ ಮಾಡಿದ್ದು, ಮಾಸ್ಕ್ ಎಲ್ಲಿ? ಮಾಸ್ಕ್? ಮಾಸ್ಕ್ ಧರಿಸಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಎಲ್ಲಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಜನಪ್ರತಿನಿಧಿಗಳಾಗಿ ಜನರಿಗೆ ಮಾದರಿಯಾಗುವ ಕೆಲಸ ಮಾಡಬೇಕಾದವರೇ ಈ ರೀತಿ ಜವಾಬ್ದಾರಿ ಮರೆತು ನಡೆದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.