ಗಡಿ ನಿಯಮ ಉಲ್ಲಂಘಿಸಿ ಭಾರತದೊಳಗೆ ಒಳ ನುಸುಳಲು ಯತ್ನಿಸಿದ 5 ನುಸುಳುಕೋರರನ್ನ ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಪಂಜಾಬ್ನ ತರನ್ ಎಂಬ ಭಾರತ ಹಾಗೂ ಪಾಕಿಸ್ತಾನದ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಘಟನೆ ನಡೆದಿದ್ದು, ಶನಿವಾರ ಮುಂಜಾನೆ 4.15 ಸುಮಾರಿಗೆ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ್ದಾರೆ ಎಂದು ಬಿಎಸ್ಎಫ್ ಹೇಳಿದೆ.
ಮೊದಲು ಇಬ್ಬರು ನುಸುಳುಕೊರರು ಗಡಿ ದಾಟಲು ಮುಂದಾಗಿದ್ದಾರೆ, ಈ ವೇಳೆ ಮಾತಿಗೆ ಮುಂದಾದ ಬಿಎಸ್ಎಫ್ನ ಸಿಬ್ಬಂದಿಗಳ ಮೇಲೆ ಏಕಾಏಕಿ ನುಸುಳುಕೋರರು ಗುಂಡು ಹಾರಿಸಿದ್ದಾರೆ. ಅವರ ಗುಂಡಿನಿಂದ ರಕ್ಷಿಸಿಕೊಳ್ಳಲು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ಕೂಡ ಪ್ರತಿ ದಾಳಿ ನಡೆಸಿದ್ದಾರೆ.
ಬಳಿಕ ಆಪರೇಷನ್ ಆರಂಭಿಸಿದ ಭದ್ರತಾ ಪಡೆಗೆ ಇವರೊಂದಿಗೆ ಇನ್ನೂ ಮೂವರು ನುಸುಳುಕೋರರು ಇರುವುದು ಅರಿವಿಗೆ ಬಂದಿದೆ. ಹೀಗಾಗಿ ಅವರ ಮೇಲೂ ದಾಳಿ ನಡೆಸಿದ್ದಾರೆ. ಆದರೆ ನುಸುಳುಕೋರರು ಯಾವ ದೇಶದವರೆಂದು ಇನ್ನೂ ದೃಢಪಟ್ಟಿಲ್ಲ ಎಂದು ಬಿಎಸ್ಎಫ್ ಹೇಳಿಕೊಂಡಿದೆ. ಘಟನೆಯಲ್ಲಿ ಅಪಾರ ಪ್ರಮಾಣದ ಬಂದೂಕು ಹಾಗೂ ಸ್ಪೋಟಕಗಳನ್ನು ವಶಪಡಿಸಲಾಗಿದೆ.