ಚಿತ್ರ ಪ್ರದರ್ಶಕರ ಬೇಡಿಕೆ ಈಡೇರಿದರೆ ಥಿಯೇಟರ್ ಓಪನ್

ಮೈಸೂರು, ಅ. 30: ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಚಿತ್ರಮಂದಿರಗಳನ್ನು ಆರಂಭಿಸುವುದಿಲ್ಲ. ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳ ಅಧ್ಯಕ್ಷ ಆರ್.ಆರ್. ಓದುಗೌಡರ ಹೇಳಿದರು.

ನಗರದ ಗಾಯತ್ರಿ ಚಿತ್ರಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಥೀಯೇಟರ್ ಉದ್ಯಮಕ್ಕೆ 15 ಸಾವಿರ ಕೋಟಿ ರೂ. ನಷ್ಟವಾಗಿದೆ. ಜತೆಗೆ ಸರ್ಕಾರ ಥಿಯೇಟರ್ಗಳ ನವೀಕರಣ ಶುಲ್ಕವನ್ನು ಸಹ ಹೆಚ್ಚಿಸಿದ್ದು, 5 ಸಾವಿರವಿದ್ದ ನವೀಕರಣ ಶುಲ್ಕ 1 ಲಕ್ಷದ 25 ಸಾವಿರಕ್ಕೆ ಏರಿಸಲಾಗಿದೆ. ಇದರಿಂದ ಎಲ್ಲಾ ಚಿತ್ರ ಪ್ರದರ್ಶಕ ಮಾಲೀಕರಿಗೂ ತೊಂದರೆ ಆಗಿದೆ ಎಂದರು.

ನಮಗೆ ಲೈಸೆನ್ಸ್ ರೀನಿವಲ್ ಆಗೋದು ಐದು ವರ್ಷಕ್ಕೊಮ್ಮೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಒಂದೊಂದು ರೀತಿಯಲ್ಲಿ ಶುಲ್ಕವಿದ್ದು, ಮೈಸೂರಿನವರು ಈಗಾಗಲೇ ಈ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಈ ಬಗ್ಗೆ ಯಾವುದೇ ತೀರ್ಪು ಬಂದಿಲ್ಲ. ನಾವು ಚಿತ್ರ ಮಂದಿರಗಳನ್ನು ಬಂದ್ ಮಾಡಿದರೆ ನಿರ್ಮಾಪಕರಿಗೆ ತೊಂದರೆ. ನಾವು ಸಿಂಗಲ್ ಸ್ಕ್ರೀನ್ ನವರು ನಮ್ಮಿಂದಲೇ ನಿರ್ಮಾಪಕರಿಗೆ ಹೆಚ್ಚು ಹಣ ಬರುವುದು. ಸಿಂಗಲ್ ಸ್ಕ್ರೀನ್ ಬಿಟ್ಟರೆ ಬೇರೆ ಯಾವುದರಿಂದಲೂ ಹೆಚ್ಚು ಹಣ ಬರುವುದಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ, ನಮ್ಮ ಬೇಡಿಕೆಗೆ ಸರ್ಕಾರ ಒಪ್ಪಿದರೆ ಮಾತ್ರ ನಾವು ಚಿತ್ರಮಂದಿರ ಓಪನ್ ಮಾಡುತ್ತೇವೆ ಎಂದು ಹೇಳಿದರು.

ಆದ್ದರಿಂದ ನಮ್ಮ ಬೇಡಿಕೆ ಈಡೇರುವವರೆಗೂ ಚಿತ್ರಮಂದಿರ ಆರಂಭ ಮಾಡುವುದಿಲ್ಲ, ಸರ್ಕಾರ ನನ್ನೊಂದಿಗೆ ಚರ್ಚೆ ಮಾಡಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಹೀಗಾಗಿ ಜನವರಿಯಾದರೂ ಚಿತ್ರಮಂದಿರ ಓಪನ್ ಆಗೋದು ಅನುಮಾನ ಎಂದರು. ಇದಕ್ಕೂ ಮುನ್ನ ದಕ್ಷಿಣ ಕರ್ನಾಟಕ ಭಾಗದ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಸಭೆ ನಡೆಸಲಾಯಿತು.

Exit mobile version