ಚಿಕ್ಕಮಗಳೂರು, ಅ. 23: ಕರ್ನಾಟಕದಲ್ಲಿ ಕಣ್ಮನ ಸೆಳೆಯುವ ಘಾಟ್ ಎಂದರೆ ಅದು ಕಾಫಿನಾಡು ಚಿಕ್ಕಮಗಳೂರು ಹಾಗೂ ಬಂದರು ನಗರಿ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಕೊಂಡಿಯಾಗಿರುವ ಚಾರ್ಮಾಡಿ ಘಾಟ್. ಇದು ಇತ್ತೀಚೆಗೆ ಅಪಾಯದಂಚಿನಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಚಾರ್ಮಾಡಿ ಘಾಟ್ ಗೆ ಬಿದ್ದಿರುವ ಹೊಡೆತ ಅಷ್ಟಿಷ್ಟಲ್ಲ. 2019ರ ಮಹಾಮಳೆಗೆ ಇಡೀ ಚಾರ್ಮಾಡಿ ಘಾಟ್ ಅಲ್ಲೋಲ ಕಲ್ಲೋಲವಾಗಿತ್ತು. ಒಮ್ಮೆ ಮಳೆ ಬಂದರೂ ಸಾಕು, ಚಾರ್ಮಾಡಿ ಘಾಟ್ ಬಂದ್ ಆಗುತ್ತದೆ.
30ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಉಂಟಾಗಿ, ಬರೋಬ್ಬರಿ 6 ತಿಂಗಳು ಚಾರ್ಮಾಡಿ ಘಾಟ್ ರಸ್ತೆ ಬಂದ್ ಆಗಿತ್ತು. ಇತಿಹಾಸದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ಈ ರಸ್ತೆ ಘಾಸಿಯಾಗಿತ್ತು. ಆ ಬಳಿಕ ಈ ಬಾರಿಯ ಮಳೆಗಾಲದಲ್ಲೂ ಅಲ್ಲಲ್ಲಿ ಗುಡ್ಡ ಕುಸಿತವಾಗಿ ಅನೇಕ ಸಲ ಚಾರ್ಮಾಡಿ ಘಾಟ್ ಬಂದ ಆಗಿತ್ತು.
ಇದೀಗ ಮಳೆ ಬಿಟ್ಟಿದೆ ಭಾರೀ ವಾಹನಗಳನ್ನ ಹೊರತುಪಡಿಸಿ ಬಸ್, ಕಾರು, ಜೀಪ್, ಟಿಟಿ, ಬೈಕ್ ಸೇರಿದಂತೆ ಲಘು ವಾಹನಗಳು ಸಂಚರಿಸುತ್ತಿವೆ. ಈ ಮಧ್ಯೆ ಮಳೆ ಇಲ್ಲದಿದ್ದರೂ ಅಲ್ಲಲ್ಲಿ ಭಾರೀ ಗಾತ್ರದ ಬಂಡೆಗಳು ರೋಡಿಗೆ ಅಪ್ಪಳಿಸುತ್ತಿವೆ. ಇತ್ತೀಚೆಗೆ ಕೂಡ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಅಲೇಖಾನ್ ಗ್ರಾಮದ ಬಳಿ ಬೃಹತ್ ಬಂಡೆ ರಸ್ತೆಗೆ ಬಿದ್ದಿರುವುದು ಈ ಭಾಗದ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿದೆ.
ಚಾರ್ಮಾಡಿ ಘಾಟ್ನ ಹಲವೆಡೆ ಈ ರೀತಿ ಗುಡ್ಡಕ್ಕೆ ಅಂಟಿಕೊಂಡಿರುವ ಬಂಡೆಗಳು ಸಡಿಲಗೊಂಡಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಆದ್ದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪಯಣಿಸುವ ಅನಿವಾರ್ಯತೆ ಎದುರಾಗಿದ್ದು ಭವಿಷ್ಯದಲ್ಲಿ ಚಾರ್ಮಾಡಿ ರಸ್ತೆ ಉಳಿಯುತ್ತಾ ಎನ್ನುವ ಅನುಮಾನ ಸ್ಥಳೀಯರದ್ದಾಗಿದೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಮಳೆಯಾಗುತ್ತಿರುವ ಸಂದರ್ಭದಲ್ಲಿ ಇತ್ತೀಚೆಗೆ ಬಂಡೆಗಳು ಬೀಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಬಿಸಿಲಿನ ಸಂದರ್ಭದಲ್ಲೂ ಬಂಡೆಗಳು ಮೇಲಿಂದ ರಸ್ತೆಗೆ ಬೀಳುತ್ತೆ ಅಂದರೆ ಎಂತಹವರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ಒಂದು ಕ್ಷಣ ಯೋಚನೆ ಮಾಡುವಂತಾಗಿದೆ. ಕಳೆದ ಬಾರಿಯ ಮಳೆಗೆ ಹಾನಿಯಾಗಿರುವ ರಸ್ತೆಯನ್ನ ಸರ್ಕಾರ ಕೂಡ ಶಾಶ್ವತವಾಗಿ ಸರಿಮಾಡುವ ಗೋಜಿಗೆ ಹೋಗಿಲ್ಲ. ಈ ಮಧ್ಯೆ ಮೇಲಿಂದ ಬಂಡೆಗಳು ಉರುಳುತಿರುವುದು ಜನಸಾಮಾನ್ಯರಲ್ಲಿ ಇನ್ನಿಲ್ಲದ ಆತಂಕವನ್ನು ಸೃಷ್ಟಿಸಿದೆ.