ತಂದೆ, ತಾಯಿ ಹೇಳಿದ ಬುದ್ಧಿವಾದಕ್ಕೆ ನೊಂದು ಪ್ರೇಮಿಗಳ ಆತ್ಮಹತ್ಯೆ

ಪ್ರೇಮದಲ್ಲಿದ್ದ ಯುವಜೋಡಿಗಳು ತಮ್ಮ ಪೋಷಕರು ನೀಡಿದ ಸಲಹೆಗೆ ಕೋಪಗೊಂಡು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಟಿ ನರಸಿಪುರ ತಾಲ್ಲೂಕಿನ ಹೆಮ್ಮಿಗೆ ಸೇತುವೆ ಬಳಿ ಈ ಘಟನೆ ನಡೆದಿದ್ದು, ತಂದೆ ತಾಯಿ ಹೇಳಿದ ಬುದ್ಧಿವಾದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮನು (21) ಮತ್ತು ದೀಪಶ್ರೀ (16) ಎಂಬ ಯುವಜೋಡಿಗಳೇ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದು ಬಂದಿದೆ. ಮನು ನಂಜನಗೂಡಿನ ಕಾಮಹಳ್ಳಿ ಗ್ರಾಮದವರಾಗಿದ್ದರೆ, ದೀಪಶ್ರೀ ಟಿ ನರಸೀಪುರ ತಾಲ್ಲೂಕಿನ ಶ್ರೀರಂಪುರ ಗ್ರಾಮದವರು. ದೀಪಶ್ರೀ ಟಿ ನರಸಿಪುರದ ವಿದ್ಯೋದಯ ಕಾಲೇಜಿನಲ್ಲಿ ಎರಡನೇ ಪಿಯು ಓದುತ್ತಿದ್ದರು.

ಮನು ಮತ್ತು ದೀಪಶ್ರೀ ಇಬ್ಬರೂ ಕೆಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದು ಪೋಷಕರು ಬೈದು ಬುದ್ದಿ ಹೇಳಿದ್ದಾರೆ, ಮೊದಲು ಓದಿನ ಕಡೆ ಗಮನಕೊಡಿ, ಇದೆಲ್ಲಾ ಆಮೇಲೆ ಎಂದು, ಅವರ ಮನಸ್ಸನ್ನು ಬದಲಿಸಲು ಪ್ರಯತ್ನಿಸಿದ್ದಾರೆ, ಇಷ್ಟಕ್ಕೆ ಇದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಹೆತ್ತವರ ಸಲಹೆಯಿಂದ ನಿರಾಶೆಗೊಂಡ ಯುವ ಪ್ರೇಮಿಗಳು ಮೈಸೂರು ತಲಕಾಡು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Exit mobile version