ನೌಕಾಪಡೆಯ ನಿವೃತ್ತ ಅಧಿಕಾರಿ ಮೇಲೆ ಶಿವಸೇನಾ ಕಾರ್ಯಕರ್ತರಿಂದ ಹಲ್ಲೆ

ನೌಕಾ ಪಡೆಯ ನಿವೃತ್ತ ಅಧಿಕಾರಿ ಮೇಲೆ ಶಿವಸೇನಾ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಿವಸೇನೆಯ ಆರು ಕಾರ್ಯಕರ್ತನನ್ನು ಬಂಧಿಸಲಾಗಿದೆ.

ನೌಕಾಪಡೆಯ ನಿವೃತ್ತ ಅಧಿಕಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾರ್ಟೂನ್ ಚಿತ್ರವನ್ನು ವಾಟ್ಸಾಪ್‌ನಲ್ಲಿ ಫಾರ್ವರ್ಡ್ ಮಾಡಿದ್ದರು ಎನ್ನಲಾಗಿದೆ. ಈ ಕಾರಣದಿಂದ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ, ಮುಂಬೈನ ಸಮ್ತಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇನ್ನು ಮದನ್ ಶರ್ಮಾ ಅವರಿಗೆ ವಾಟ್ಸಾಪ್ ಸಂದೇಶದಲ್ಲಿ ಬಂದಿದ್ದ ಕಾರ್ಟೂನ್ ಒಂದನ್ನು ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹಂಚಿಕೊಂಡಿದ್ದರು, ತಮ್ಮ ನಿವಾಸದಿಂದ ಹೊರಗೆ ಬರುತ್ತಿದ್ದಂತೆಯೇ ಶಿವಸೇನೆ ಕಾರ್ಯಕರ್ತರು ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಮದನ್ ಶರ್ಮಾ ಅವರ ಕೊರಳಪಟ್ಟಿ ಹಿಡಿದೆಳೆದು ಮುಖದ ಮೇಲೆ ಬಾರಿಸುವ ದೃಶ್ಯಗಳು ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಮ್ತಾ ನಗರ ಪೊಲೀಸರು, ಶಿವಸೇನೆಯ ಕಮಲೇಶ್ ಕದಂ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Exit mobile version