ಮೈಸೂರು, ನ. 11: ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ನದಿಯಲ್ಲಿ ಮುಳುಗಿ ವಧು-ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಟೋ ಶೂಟ್ಗೆ ತೆಪ್ಪ ನೀಡಿದ ವ್ಯಕ್ತಿ, ಫೋಟೋಗ್ರಾಫರ್ ಸೇರಿದಂತೆ ಆರು ಜನರ ಮೇಲೆ ತಲಕಾಡು ಪೊಲೀಸ್ ಠಾಣೆಯಲ್ಲಿ ಐಸಿಪಿ ಸೆಕ್ಷನ್ ೩೦೪ ಆಡಿ (ನಿರ್ಲಕ್ಷ್ಯದಿಂದ ಮರಣವನ್ನುಂಟು ಮಾಡುವುದು) ಪ್ರಕರಣ ದಾಖಲಾಗಿದೆ.
ಫೋಟೋ ಶೂಟ್ನಲ್ಲಿ ಭಾಗವಹಿಸಿ ಮೃತಪಟ್ಟ ನಗರದ ಕ್ಯಾತಮಾರನ ಹಳ್ಳಿಯ ಚಂದ್ರು (೩೦) ಮತ್ತು ಶಶಿಕಲಾ (೨೦), ಫೋಟೋಗ್ರಾಫರ್ ನಿಖಿಲ್, ತೆಪ್ಪವನ್ನು ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿದಂತೆ ೬ ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸುದ್ದಿಗಾರರಿಗೆ ತಿಳಿಸಿದರು.
ಈ ತೆಪ್ಪವನ್ನು ಮೂಗಪ್ಪ ಅವರು ತಮ್ಮ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರು. ಕಟ್ಟೆಪುರ-ಮುಡುಕುತೊರೆ ನಡುವೆ ಹರಿಯುವ ಕಾವೇರಿ ನದಿಯನ್ನು ದಾಟಲು ಮೂಗಪ್ಪ ಅವರು ತೆಪ್ಪ ಬಳಕೆ ಮಾಡುತ್ತಿದ್ದರು. ಪ್ರೀ ವೆಡ್ಡಿಂಗ್ ಶೂಟ್ಗೆ ತೆಪ್ಪವನ್ನು ನೀಡುವಂತೆ ನವಜೋಡಿ ಹಾಗೂ ಅವರ ಜತೆಗಿದ್ದವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮೂಗಪ್ಪ ಅವರು ತೆಪ್ಪ ನೀಡಿದ್ದಾರೆ ಎಂದು ವಿವರಿಸಿದರು. ಈ ನಡುವೆ ನದಿ ಪಾತ್ರದಲ್ಲಿ ಅಸುರಕ್ಷತೆಯಿಂದ ತೆಪ್ಪ, ದೋಣಿ, ಬೋಟ್ ನಡೆಸುವವರ ವಿರುದ್ಧ ಕ್ರಮ ವಹಿಸುವಂತೆ ನೀರಾವರಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಮಾಹಿತಿ ನೀಡಿದರು.