ಬೆಂಗಳೂರು, ಅ.20: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಸ್ ಆರಂಭದಲ್ಲಿಯೇ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಪೊಲೀಸರ ಅತಿಥಿಯಾಗಿ ಜೈಲುವಾಸ ಅನುಭವಿಸುತ್ತಿರುವ ಇವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅವರಿಗೆ ಜಾಮೀನು ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿರುವುದು ಆಶ್ಚರ್ಯಕರ ಸಂಗತಿ.
‘ಸಂಜನಾ ರಾಗಿಣಿ ಸೇರಿದಂತೆ ಡ್ರಗ್ಸ್ ಕೇಸ್ನಲ್ಲಿ ಭಾಗಿ ಆಗಿರುವ ಎಲ್ಲರಿಗೂ ಜಾಮೀನು ನೀಡಬೇಕು. ಕೇಸ್ನಲ್ಲಿ ಇರುವ ಎಲ್ಲರನ್ನೂ ವಜಾ ಮಾಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಸಿಟಿ ಸಿವಿಲ್ ಸೆಷನ್ ಕೋರ್ಟ್ನ ಜಡ್ಜ್ಗೆ ಈ ಪತ್ರ ಬರೆಯಲಾಗಿತ್ತು. ಒಂದು ವೇಳೆ ಹಾಗೆ ಮಾಡದಿದ್ದರೆ ಕಾರಿನಲ್ಲಿ ಬಾಂಬ್ ಇಡುತ್ತೇವೆ ಎಂಬುದಾಗಿಯೂ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಡ್ರಗ್ಸ್ ಕೇಸ್ ಮಾತ್ರವಲ್ಲದೆ ಡಿಜೆ ಹಳ್ಳಿ ಪ್ರಕರಣದ ತನಿಖೆಯನ್ನು ನಿಲ್ಲಿಸಿ ಎಂಬುದಾಗಿಯೂ ಮತ್ತೊಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ‘ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸುಮ್ಮನಿರಬೇಕು. ಇಲ್ಲದಿದ್ದರೆ ಕಮಿಷನರ್ ಕಚೇರಿ ಸ್ಫೋಟ ಮಾಡುತ್ತೇವೆ’ ಎಂದು ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಪತ್ರ ಬಂದಿದ್ದು, ಅವರು ಯಾಕೆ ರಾಗಿಣಿ ಮತ್ತು ಸಂಜನಾರ ಜಾಮೀನಿಗಾಗಿ ಬೇಡಿಕೆ ಇಡುತ್ತಾರೆ ಎಂಬ ಪ್ರಶ್ನೆ ಮೂಡಿರುವುದು, ಆಶ್ಚರ್ಯಕರ. ನಿಜಕ್ಕೂ ಇದು ಉಗ್ರ ಸಂಘಟನೆಯ ಪತ್ರವೇ ಅಥವಾ ಯಾರೋ ಮಾನಸಿಕ ಅಸ್ವಸ್ಥರು ಈ ರೀತಿ ಮಾಡಿರಬಹುದೇ ಎಂಬ ಅನುಮಾನ ಕೂಡ ಸೃಷ್ಟಿಯಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನಿಂದ ಈ ಪತ್ರಗಳು ಬಂದಿವೆ ಎಂದು ಎನ್ನಲಾಗುತ್ತಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ಪತ್ರ ರವಾನೆಯಾಗಿದ್ದ ತುಮಕೂರಿನತ್ತ ತೆರಳಿದ ಒಂದು ತಂಡವು ರಾತ್ರಿ 12 ಗಂಟೆ ಸಮಯದಲ್ಲಿ ಚೇಳೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು ಸಿ ಹರಿವೇಸಂದ್ರ ಗ್ರಾಮದ ರಮೇಶ್ ಹಾಗೂ ಚನ್ನಬಸವ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ರಾತ್ರಿಯಿಡೀ ತೀವ್ರ ವಿಚಾರಣೆ ನಡೆಸಿದರು.
ಅವರು ನೀಡಿದ ಮಾಹಿತಿ ಮೇರೆಗೆ ತಿಪಟೂರಿನ ಲಿಂಗದಹಳ್ಳಿ ನಿವಾಸಿ ರಾಜಶೇಖರ್ ಮತ್ತು ಹಾಗಲವಾಡಿಯ ವೇದಾಂತ್ ಎಂಬುವರನ್ನು ತಡರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಯಿತು. ರಾಜಶೇಖರ, ವೇದಾಂತ್ ಮತ್ತು ರಮೇಶನ ನಡುವೆ ಆಸ್ತಿ ವಿವಾದವಿತ್ತು. ರಮೇಶನ ಕುಟುಂಬದವರು ಅವಿದ್ಯಾವಂತರಾಗಿದ್ದಾರೆ.
ಗುಬ್ಬಿ , ಚೇಳೂರು ಪೊಲೀಸರ ಸಹಕಾರದೊಂದಿಗೆ ಸಿಸಿಬಿ ಪೊಲೀಸರು ಈಗಾಗಲೇ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.