ಬಾಗಲಕೋಟೆ, ಅ.20: ಯಡಿಯೂರಪ್ಪ ಅವರನ್ನು ಕೆಳಗಿಳಿಸೋ ಬಗ್ಗೆ ಬಿಜೆಪಿಯಲ್ಲೇ ಚರ್ಚೆ ನಡೆಯುತ್ತಿರುವುದು ನಿಜ. ಆದರೆ ಯಾರು ಸಿಎಂ ಆಗ್ತಾರೆ ಎಂಬುದು ನನಗೆ ಗೊತ್ತಿಲ್ಲ. ಬಿಜೆಪಿಯವರ ಆಂತರಿಕ ತಿಕ್ಕಾಟದಿಂದ ಸರ್ಕಾರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು ಸಿದ್ಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಯಡಿಯೂರಪ್ಪ ಬಹಳ ದಿನ ಸಿಎಂ ಆಗಿ ಇರೊಲ್ಲ ಎಂದು ಶಾಸಕ ಬಸನಗೌಡ ಯತ್ನಾಳ ಅವರ ಹೇಳಿಕೆಯ ಬಗ್ಗೆ ಬಾದಾಮಿ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಬಿಜೆಪಿಯಲ್ಲೇ ನಡೆಯುತ್ತಿದೆ. ಹೀಗಾಗಿ, ನಾವು ಸರ್ಕಾರ ಬೀಳಿಸೋಕೆ ಹೋಗುವುದಿಲ್ಲ ಎಂದು ಹೇಳಿದರು.
ತಮ್ಮ ಕ್ಷೇತ್ರಕ್ಕೆ ಅನುದಾನ ಕಡಿತಗೊಂಡ ಕಾರಣ ಬಸನಗೌಡ ಪಾಟೀಲ ಯತ್ನಾಳ ಅವರಲ್ಲಿ ಸಿಎಂ ಬಗ್ಗೆ ಅಸಮಾಧಾನವಾಗಿದೆ. ಪಾಪ ಅವರಿಗೂ ಈಗ ಬಿಸಿ ಮುಟ್ಟಿದ್ದು, ಸತ್ಯ ಹೇಳೋಕೆ ಶುರು ಮಾಡಿದ್ದಾರೆ ಎಂದು ಕಟುಕಿದರು.
ಶಿರಾ, ಆರ್.ಆರ್. ನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಈಗಾಗಲೇ ಗೆದ್ದಾಗಿದೆ. ಫಲಿತಾಂಶವೊಂದೇ ಬಾಕಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆ ಎರಡು ಕ್ಷೇತ್ರಗಳು ಯಡಿಯೂರಪ್ಪ ಅವರ ಜೇಬಿನಲ್ಲಿವೆಯೇ ಎಂದು ಪ್ರಶ್ನಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಣಿಲಾರದವರು ನೆಲ ಡೊಂಕು ಅಂದರಂತೆ ಎಂಬಂತಾಗಿದೆ ಎಚ್.ಡಿ.ಕುಮಾರಸ್ವಾಮಿ ಅವರ ವರ್ತನೆ. ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಆಗದೇ ಇರೋರು ಈಗ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಕೆಡವಿದರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗೋದಿಲ್ಲ ಎಂದರು.