ಮೈಸೂರು, ಅ. 31: ಸಾಮಾನ್ಯವಾಗಿ ಮದುವೆಗಳಲ್ಲಿ ನೆಂಟರು, ಸಂಬಂಧಿಕರು, ಸ್ನೇಹಿತರು, ಆಪ್ತ ಸಹೋದ್ಯೋಗಿಗಳನ್ನು ಕರೆಯುವುದು ವಾಡಿಕೆ. ಆದರೆ ಮದುವೆ ಸಂಭ್ರಮವೆಂದರೆ ವಧು-ವರರಿಗೆ ಶುಭಾಶಯ ತಿಳಿಸುವುದು, ಉಡುಗೊರೆ ನೀಡುವುದು, ವಿಶೇಷ ಭೋಜನ ಸವಿಯುವುದು ಆಗಿರುತ್ತದೆ. ಆದರೆ, ಇಲ್ಲೊಬ್ಬರು ವ್ಯಕ್ತಿ ತಮ್ಮ ಮಗಳ ಮದುವೆಯನ್ನು ಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ.
ಶಿಕ್ಷಣ, ಪೊಲೀಸ್, ವೈದ್ಯಕೀಯ, ಶ್ರಮಿಕ ವರ್ಗ ಹಾಗೂ ಪತ್ರಿಕಾ ವರ್ಗದ ೮೦ ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರನ್ನೇ ಮದುವೆ ವೇಳೆ ಸನ್ಮಾನಿಸಲು ಮುಂದಾಗಿದ್ದಾರೆ. ತಾಲ್ಲೂಕಿನ ಬೋಗಾದಿ ಗ್ರಾಮದ ನಿವಾಸಿ ನಾಗರಾಜು ಅವರೇ ತಮ್ಮ ಮಗಳಾದ ರಶ್ಮಿ ವಿವಾಹವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿರುವುದು.
ಇದಕ್ಕಾಗಿಯೇ ತಮ್ಮ ಮಗಳ ಮದುವೆ ಕರೆಯೋಲೆಯಲ್ಲಿ ಸನ್ಮಾನಿತರ ಹೆಸರು ಮುದ್ರಿಸಿ ಅವರಿಂದ ನೂತನ ವಧು-ವರರಿಗೆ ಶುಭ ಕೋರುವಂತೆಯೂ ಕೋರಿದ್ದಾರೆ.
ತಮ್ಮ ವಿಭಿನ್ನ ಕಾರ್ಯಕ್ರಮ ಕುರಿತು ಮಾತನಾಡಿರುವ ನಾಗರಾಜ್ ಅವರು, ʻಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸಿರುವ ಎಲ್ಲರನ್ನು ಸ್ಮರಿಸುವ ಮೂಲಕ ಸರಳ ವಿವಾಹದ ಮತ್ತೊಂದು ಮುಖದ ಪರಿಚಯ ಮಾಡುವ ಪ್ರಯತ್ನ ಇದಾಗಿದೆʼ ಎಂದು ಹೇಳಿಕೊಂಡರು.