ರವಿ ಬಸ್ರೂರು ಚಿತ್ರದಲ್ಲಿ ಚಿರಶ್ರೀ ನಾಯಕಿ

ಹೆಸರೇ ಸೂಚಿಸುವಂತೆ ಚಿರಶ್ರೀ ಅಂಚನ್ ಕರಾವಳಿಯ ಅಂಚಿನಿಂದ ಬಂದಾಕೆ. ತುಳು ಸಿನಿಮಾದ ಮೂಲಕ ಬೆಳ್ಳಿಪರದೆಯ ಅರಂಗೇಟ್ರಂ ಮುಗಿಸಿಕೊಂಡು ಕನ್ನಡ, ತಮಿಳು, ತೆಲುಗಲ್ಲಿಯೂ ತಮ್ಮ ಇರವನ್ನು ಸಾರಿದಾಕೆ. ಲಾಕ್ಡೌನ್‌ಗೂ ಮೊದಲೇ ಮಂಗಳೂರು ಸೇರಿದ ಚಿರಶ್ರೀ  ಪ್ರಸ್ತುತ ರವಿ ಬಸ್ರೂರು ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ತುಳು ಸೇರಿದಂತೆ ಚತುರ್ಭಾಷೆಗಳಲ್ಲಿ ನಟಿಸಿದ ತಮ್ಮ ಅನುಭವದ ಬಗ್ಗೆ ಅವರು ವಿಜಯ ಟೈಮ್ಸ್ ಜತೆಗೆ ಮಾತನಾಡಿದ್ದಾರೆ.

ಚಿತ್ರರಂಗಕ್ಕೆ ನಿಮ್ಮ ಪ್ರವೇಶ ಆದ ಬಗೆ ಹೇಗೆ?

ನಾನು ಆಗ ಪಿಯುಸಿ ವಿದ್ಯಾರ್ಥಿನಿಯಾಗಿದ್ದೆ. `ರಂಬಾರೂಟಿ’ ಎನ್ನುವ ತುಳು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದೆ. ಮೊದಲು ಚಿತ್ರೀಕರಣ ಆರಂಭಿಸಿದ ಸಿನಿಮಾ ಅದೇ ಆಗಿದ್ದರೂ ಬಿಡುಗಡೆಯಾಗಿದ್ದು ಮಾತ್ರ `ಪವಿತ್ರಾ’ ಎನ್ನುವ ಚಿತ್ರ.  ಅದು ನೂರು ದಿನಗಳ ಕಾಲ ಪ್ರದರ್ಶನ ಕಂಡಂಥ ಸಿನಿಮಾ. ಪಾತ್ರಕ್ಕಾಗಿ ನನಗೆ ಎರಡು ಪ್ರಶಸ್ತಿಗಳೂ ದೊರಕಿದ್ದವು. ಅದರ ಬಳಿಕ ನಾನು ನಟಿಸಿದ್ದು ಕನ್ನಡ ಸಿನಿಮಾದಲ್ಲಿ. ಉಪೇಂದ್ರ ಅವರ `ಕಲ್ಪನಾ2′ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರವೇ ದೊರಕಿತ್ತು. ಆನಂತರ ಅಶೋಕ್ ಕಶ್ಯಪ್ ನಿರ್ದೇಶನದ `ಹುಲಿರಾಯ’ ಚಿತ್ರದಲ್ಲಿ ನಟಿಸಿದೆ.

ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿದ ಬಗ್ಗೆ ಹೇಳಿ

ಹುಲಿರಾಯ ಚಿತ್ರದ ಬಳಿಕ ನನಗೆ ತೆಲುಗು ಭಾಷೆಯಿಂದ ಆಫರ್ ಬಂತು. ಹಾಗೆ ತೆಲುಗುವಿನಲ್ಲಿಯೂ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. `ಆಮೆ ಅತಡೈತೆ’ ಎನ್ನುವುದು ಅಲ್ಲಿ ನನ್ನ ಮೊದಲ ಚಿತ್ರ. ಆನಂತರ ಅವಕಾಶ ದೊರಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ನಿರ್ದೇಶನದ `ದುಪ್ಪಟ್ಲೊ ಮಿನ್ನಾಗು’ ತೆಲುಗು ಸಿನಿಮಾದಲ್ಲಿ. ಕಳೆದ ವರ್ಷ `ಆಗವನ್’ ಎನ್ನುವ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದೇನೆ.  ಇದರ ನಡುವೆ ತುಳುವಲ್ಲಿ `ಕರ್ಣೆ’ ಎನ್ನುವ ಚಿತ್ರದಲ್ಲಿಯೂ ನಟಿಸಿದ್ದೇನೆ. ನನಗೆ ಭಾಷೆಗಳ ಹೊರತಾಗಿ ಸಿನಿಮಾಗಳ ಮೇಕಿಂಗ್‌ ವಿಚಾರದಲ್ಲಿ ರಾಜ್ಯದಿಂದ ರಾಜ್ಯಗಳಿಗೆ ಅಂಥ ವ್ಯತ್ಯಾಸವೇನೂ ಅರಿವಾಗಿಲ್ಲ.

ನಟನೆಯ ವಿಚಾರದಲ್ಲಿ ನಿಮಗೆ ಮನೆಯಿಂದ ದೊರಕುವ ಪ್ರೋತ್ಸಾಹ ಹೇಗಿದೆ?

ನನ್ನ ತಂದೆ ತಾಯಿಗೆ ಅಣ್ಣ ಮತ್ತು ನಾನು ಹೀಗೆ ಇಬ್ಬರು ಮಕ್ಕಳು. ಎನ್‌ಎಂಪಿಟಿಯಲ್ಲಿ ವೃತ್ತಿಯಲ್ಲಿದ್ದ ನನ್ನ ತಂದೆ ಮಧುಸೂದನ್ ನಮ್ಮನ್ನು ಅಗಲಿ ಹೋಗಿದ್ದಾರೆ. ನನ್ನ ಅಣ್ಣ ಚಿರಂಜೀವಿ ಬಿಸ್‌ನೆಸ್‌ಮ್ಯಾನ್‌. ತಾಯಿ ಪೂರ್ಣಿಮಾ ಗೃಹಿಣಿ. ಬಾಲ್ಯದಿಂದಲೇ ಮೇಕಪ್ ಮಾಡುವುದು, ಡ್ರೆಸ್ ಮಾಡುವುದರಲ್ಲೆಲ್ಲ ಆಸಕ್ತಿ ಹೆಚ್ಚೇ ಇತ್ತು. ಆಗನಿಂದ ಇಲ್ಲಿಯವರೆಗೆ ನನ್ನ ಆಸಕ್ತಿಗಳಿಗೆ ಅಮ್ಮ ಮತ್ತು ಮನೆಯವರೆಲ್ಲ ಪ್ರೋತ್ಸಾಹವಾಗಿ ನಿಂತಿದ್ದಾರೆ. ಶಾಲಾ ದಿನಗಳಲ್ಲಿ ಡಾನ್ಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಭರತನಾಟ್ಯದ ಬೇಸಿಕ್ ಅಭ್ಯಾಸ ಮಾಡಿದ್ದೆ. ಒಂದು ವರ್ಷಗಳ ಕಾಲ ಫಿಲ್ಮೀಡ್ಯಾನ್ಸ್ ಅಭ್ಯಾಸ ಮಾಡಿದ್ದೆ. ಅವೆಲ್ಲ ನನಗೆ ಚಿತ್ರರಂಗಕ್ಕೆ ಬಂದಾಗ ಬಹಳಷ್ಟು ಸಹಾಯವಾಯಿತು.

ಮಂಗಳೂರಿನಲ್ಲಿ ಲಾಕ್ಡೌನ್ ದಿನಗಳು ಹೇಗಿದ್ದವು?

ದೇಶವೇ ಲಾಕ್ಡೌನ್‌ ಆಗಿದ್ದ ಕಾರಣ ಎಲ್ಲಿದ್ದರೂ ಮನೆಯೊಳಗೇ ಇರಬೇಕಲ್ಲವೇ? ಹಾಗಾಗಿ ಮನೆಯಲ್ಲೇ ಇದ್ದೆ. ಆದರೆ ಅಡುಗೆ ವಿಚಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೆ. ಬಿರಿಯಾನಿಯಲ್ಲಿ ಸ್ಪೆಷಲ್ ಮಾಡುತ್ತೇನೆ. ಮುಖ್ಯವಾಗಿ ನಾನು ನಾನ್‌ವೆಜ್‌ ಪ್ರಿಯೆ. ಚಿಕನ್ ಮತ್ತು ಸಿಗಡಿ ಬಿರಿಯಾನಿಗಳಲ್ಲಿ ಹೊಸತನ ಪ್ರಯೋಗಿಸಿದ್ದೇನೆ. ಚಿಕನ್‌ ವಿಭಾಗದಲ್ಲಿ ತುಂಬ ವೆರೈಟಿಗಳನ್ನು ಮಾಡುತ್ತೇನೆ. ಫಿಷ್ ಫ್ರೈ, ಚಿಕನ್ ಸುಕ್ಕಾ ಹೀಗೆ. ನೀರ್‌ದೋಸೆ ಮತ್ತು ಚಿಕನ್ ಸುಕ್ಕ ನನ್ನ ಫೇವರಿಟ್ ಆಹಾರ. ನಾನು ಡಯೆಟ್ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಆದರೆ ಜಿಮ್ ಮಾಡುವುದನ್ನು ತಪ್ಪಿಸಿಕೊಂಡಿಲ್ಲ.

ಹೊಸ ಪ್ರಾಜೆಕ್ಟ್‌ಗಳು ಯಾವುವು? ನೀವು ಚಿತ್ರಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?

ಕನ್ನಡದಲ್ಲಿ ನಾನು ನಾಯಕಿಯಾಗಿರುವ `ಕಲಿವೀರ’ ಬಿಡುಗಡೆಗೆ ತಯಾರಿದೆ. ಅದರ ಜೊತೆಗೆ ರವಿ ಬಸ್ರೂರು ನಿರ್ದೇಶನದ ಹೊಸ ಕನ್ನಡ ಚಿತ್ರಕ್ಕೆ ನಾಯಕಿಯಾಗಿದ್ದೇನೆ. ಅದರ ಚಿತ್ರೀಕರಣ ಇನ್ನೂ ಪೂರ್ತಿಯಾಗಿಲ್ಲ. ಅದರಲ್ಲಿ ನನ್ನದು ಕಾಲೇಜ್ ಹುಡುಗಿಯ ಪಾತ್ರ. ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸಹಜವಾಗಿ ನಾನು ಒಳ್ಳೆಯ ಕತೆ ಇರುವ ಸಿನಿಮಾದಲ್ಲಿ ಒಳ್ಳೆಯದೊಂದು ಸ್ಕೋಪ್ ಇರುವ ಪಾತ್ರವನ್ನು ಬಯಸುತ್ತೇನೆ. ಲೇಡಿ ಓರಿಯೆಂಟೆಡ್ ಚಿತ್ರ ಆಗಿದ್ದರೆ ತಾನೇ ನನ್ನ ನಟನೆಯ ಕ್ಯಾಲಿಬರ್ ತೋರಿಸುವ ಅವಕಾಶ ಸಿಗಲು ಸಾಧ್ಯ? ಹಾಗಾಗಿ ಅಂಥ ಪಾತ್ರಗಳನ್ನು ಬಯಸುತ್ತೇನೆ.

ಶಶಿಕರ ಪಾತೂರು

Exit mobile version