ಬೆಂಗಳೂರು, ಅ.24: ಎರಡು ದಿನಗಳ ಮಳಡರಾಯನ ಅಬ್ಬರಕ್ಕೆ ಬೆಂಗಳೂರು ಅಕ್ಷರಶಃ ಮಳೆಯಿಂದ ತತ್ತರಿಸಿತು. ಕೋರಮಂಗಲ , ಆರ್. ಆರ್. ನಗರದಲ್ಲಿ ಸತತ 2 ದಿನವೂ ಮಳೆ ಪರಿಣಾಮ, ಫ್ಲ್ಯಾಶ್ಫ್ಲಡ್ ಉಂಟಾಯಿತು. ರಸ್ತೆಯಲ್ಲಿದ್ದ ವಾಹನಗಳು, ತಗ್ಗು ಪ್ರದೇಶಗಳಲ್ಲಿದ್ದ ಮನೆಗಳು, ನಿಲ್ದಾಣಗಳಲ್ಲಿ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಹಬ್ಬದ ಸಂತೆಗೆ ಬಂದ ಜನಸಾಮಾನ್ಯರು, ವ್ಯಾಪಾರಿಗಳು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹೀಗೆ ಎಲ್ಲರಿಗೂ ಈ “ದಿಢೀರ್ ನೆರೆ’ ಹಾಗೂ ಮಳೆಯ ಆರ್ಭಟದಿಂದ ಹೊಸಕೆರೆ ಹಳ್ಳಿಯಲ್ಲಿ ರಾಜಕಾಲುವೆ ಉಕ್ಕಿಹರಿದ ಪರಿಣಾಮ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ಎರಡನೇ ದಿನ ಜನ ಮಳೆಯ ಹೊಡೆತಕ್ಕೆ ತತ್ತರಿಸಲು ಕಾರಣವಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 20 ಮಂದಿಯ ತಂಡ ಹೊಸ ಕೆರೆ ಹಳ್ಳಿಗೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿತು. ಇದಕ್ಕೂ ಮುನ್ನ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ರಕ್ಷಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ವೇಳೆ ಸ್ಥಳಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾತ್ರಿ 8ರ ಸುಮಾರಿಗೆ ಆರ್.ಆರ್. ನಗರದಲ್ಲಿ ಗರಿಷ್ಠ 103 ಮಿ.ಮೀ. ಮಳೆ ದಾಖಲಾಗಿದೆ. ಕೋರಮಂಗಲ, ಬಿ ಟಿ ಎಂ ಲಾಔಟ್, ಸಾರಕ್ಕಿ, ಉತ್ತರಹಳ್ಳಿ, ಪಟ್ಟಾಭಿರಾಮನಗರ, ಗೊಟ್ಟಿಗೆರೆ, ಹಂಪಿನಗರ, ಅಂಜನಾಪುರ ಮತ್ತಿತರಕಡೆ ಕನಿಷ್ಠ 25ರಿಂದ ಗರಿಷ್ಠ 66 ಮಿ.ಮೀ. ಮಳೆ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
ಬೆಂಗಳೂರಿನಲ್ಲಿ ಅತಿಹೆಚ್ಚು ಮಳೆ ಅವಾಂತರಕ್ಕೆ ಮನೆಗಳಿಗೆ ನುಗ್ಗಿ ನೀರನ್ನು ಬಕೆಟ್ಗಳಲ್ಲಿ ನೀರು ಹೊರಹಾಕುತ್ತಿದ್ದ ಮಕ್ಕಳು, ವೃದ್ಧರು, ಮಹಿಳೆಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಕೆ.ಜಿ. ರಸ್ತೆ, ಜೆ.ಸಿ. ರಸ್ತೆ, ಸಜ್ಜನ್ ರಾವ್ ವೃತ್ತ, ಮೇಖ್ರೀ ವೃತ್ತ, ಆರ್.ವಿ. ರಸ್ತೆ, ಹೆಬ್ಟಾಳ, ಜಯನಗರ, ಶಾಂತಿನಗರಗಳಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಶಾಂತಿನಗರ, ಕೆ.ಆರ್. ಮಾರುಕಟ್ಟೆ ಮತ್ತಿತರ ಪ್ರಮುಖ ನಿಲ್ದಾಣಗಳಿಗೂ ಪ್ರಯಾಣಿಕರಿಗೂ ತೊಂದರೆಯಾಯಿತು.
ರಾಜಧಾನಿಯ ದಕ್ಷಿಣದಲ್ಲೇ ಮಳೆ ಅಬ್ಬರ ಹೆಚ್ಚು :
ಮಳೆಯ ಭೀಕರತೆ ಜೋರಾಗಿದ್ದರಿಂದ ರಾಜಕಾಲುವೆಯ ನೀರು ರಸ್ತೆಗೆ ಹರಿದು ಹೊಸಕೆರೆಹಳ್ಳಿಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿತು. ಮೈಲಸಂದ್ರ ಕೆರೆ ಉಕ್ಕಿಹರಿದಿದ್ದರಿಂದ ಬೆಂಗಳೂರು-ಮೈಸೂರು ಮುಖ್ಯ ರಸ್ತೆ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಮೈಲಸಂದ್ರದಿಂದ ಕುಂಬಳಗೋಡುವರೆಗೂ ರಸ್ತೆಗಳು ಜಲಾವೃತಗೊಂಡಿದ್ದವು. ಬಿಎಂಟಿಸಿ ಹಾಗೂ ಕಾಲೇಜು ಸಿಬ್ಬಂದಿಯನ್ನು ಕರೆದೊಯ್ಯುವ ಬಸ್ಗಳು, ಕಾರುಗಳು ಸೇರಿದಂತೆ 30ಕ್ಕೂ ಅಧಿಕ ವಾಹನಗಳು ಜಲಾವೃತಗೊಂಡು, ಮಾರ್ಗಮಧ್ಯೆಯೇ ಕೆಟ್ಟುನಿಂತವು. ಸ್ಥಳಕ್ಕೆ ಧಾವಿಸಿದ ಪೌರ ರಕ್ಷಣಾ ದಳ ಹಾಗೂ ಅಗ್ನಿಶಾಮಕ ಸಿಬ್ಬಂದಿ, ಬಸ್ ಮತ್ತಿತರ ವಾಹನಗಳ ಚಾಲಕರು, ಸವಾರರನ್ನು ರಕ್ಷಿಸಿದರು.
ಕೋರಮಂಗಲದಲ್ಲಿ ಬಸ್ ಡಿಪೋ ಬಳಿ ರಸ್ತೆಯೆಲ್ಲಾ ಕೆರೆಯಂತಾಗಿತ್ತು. ಮೂರು ಅಡಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಕಷ್ಟವಾಯಿತು. ಇನ್ನು ಮಡಿವಾಳದ ಬಳಿ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಬಸ್ ಸೇರಿದಂತೆ ವಾಹನಗಳಲ್ಲಿ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದರು. ಬನಶಂಕರಿಗೆ ಹೋಗುವ ಬಸ್ ತಿರುಗಿ ಬೇರೆ ರಸ್ಥೆಯಲ್ಲಿ ಹೋಗಿ ಪ್ರಯಾಣಿಕರು ಮನೆ ಸೇರಲು ರಾತ್ರಿಯಾಯಿತು.
ಬನಶಂಕರಿ 2ನೇ ಹಂತ, ಎಲ್ಐಸಿ ಕಾಲೋನಿ 1ನೇ ಕ್ರಾಸ್, ಐಟಿಐ ಲೇಔಟ್, ಸಿಂಡಿಕೇಟ್ ಲೇಔಟ್, ವಿದ್ಯಾಪೀಠ, ಉತ್ತರಹಳ್ಳಿ, ವಿ.ವಿ.ಪುರಂ, ಕೋಣಕುಂಟೆ, ವಿದ್ಯಾಪೀಠ, ಪುಟ್ಟೇನಹಳ್ಳಿ, ಯಲಚೇತನಹಳ್ಳಿ, ಚಿಕ್ಕಕಲ್ಲಸಂದ್ರ, ಜೆ.ಪಿ.ನಗರ, ಕುಮಾರಸ್ವಾಮಿ ಲೇಔಟ್, ಬೆಳ್ಳಂದೂರು, ಮಹದೇವಪುರ, ವಸಂತಪುರ, ಉತ್ತರಹಳ್ಳಿ, ಬೇಗೂರು ನಂದಿಯು ಲೇಔಟ್ ಸೇರಿದಂತೆ ನಗರದ ಹಲವೆಡೆ ರಸ್ತೆಗಳು, ಮನೆಗಳು ಹಾಗೂ ಅಪಾರ್ಟ್ಮೆಂಟ್ ಬೇಸ್ಮೆಂಟ್ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.