ಮೈಸೂರು, ಅ. 28: ದಸರಾ ಹಬ್ಬದ ಆಚರಣೆ ಹಾಗೂ ನವರಾತ್ರಿಯ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿರುವ ರಾಜವಂಶಸ್ಥ ಯದುವೀರ್ ಒಡೆಯರ್ ತಮ್ಮ ಪುತ್ರನೊಂದಿಗೆ ಗಜಪಡೆಯ ವೀಕ್ಷಣೆ ಮಾಡಿದರು.
ಪುತ್ರ ಆದ್ಯವೀರ್ ಜೊತೆಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಅರಮನೆ ಸುತ್ತಾಡಿದ ಯದುವೀರ್, ದಸರಾ ಗಜಪಡೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿ ಮಗನೊಂದಿಗೆ ಸಂಭ್ರಮದಿಂದ ಕಾಲ ಕಳೆದರು. ಈ ವೇಳೆ ಗಜಪಡೆ ಸಾರಥಿ ಅಭಿಮನ್ಯು ಮುಂದೆ ಪೋಟೋಗೆ ಪೋಸ್ ನೀಡಿದರು. ಅಭಿಮನ್ಯು ಆನೆಯನ್ನು ಮುಟ್ಟಿದ ಯದುವೀರ್ ಪುತ್ರ ಆದ್ಯವೀರ್, ಸಂತಸ ತೋರಿದರು. ಇದಕ್ಕೂ ಮೊದಲು ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆರಳಿದ ಯದುವೀರ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.